ಚಿಕ್ಕಮಗಳೂರು: ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ರಸ್ತೆ ಡಾಂಬರೀಕರಣ ಕಾಮಗಾರಿ ಬರದಿಂದ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ನಗರಸಭಾಧ್ಯಕ್ಷೆ ಶೀಲಾದಿನೇಶ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಸ್ಎಫ್ಸಿ ಅನುದಾನದಲ್ಲಿ ಸುಮಾರು ೧೦ ಕೋಟಿ ರೂಗಳನ್ನು ತಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ನಗರದ ನಾಗರಿಕರಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಬೇಕೆಂದು ಗುರಿ ಹೊಂದಿದ್ದಾರೆಂದು ಹೇಳಿದರು.
ನಗರಸಭೆಯಿಂದ ಜನತೆ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ, ಶಾಸಕರು ಇನ್ನಷ್ಟು ಉತ್ತಮ ಸೇವೆ ಮೂಲಕ ಜನಪ್ರಿಯತೆ ಗಳಿಸಲಿ ಎಂದು ಹಾರೈಸಿದರು.
ನಗರದಲ್ಲಿ ಈಗ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ, ಸಮಸ್ಯೆ ಇದೆ ಎಂದು ನಾಗರಿಕರು ದೂರು ನೀಡಿದರೆ ಖಂಡಿತ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಕಳೆದ ತಿಂಗಳು ಶಾಸಕ ಹೆಚ್.ಡಿ ತಮ್ಮಯ್ಯನವರ ನೇತೃತ್ವದಲ್ಲಿ ನಗರದ ಎಲ್ಲಾ ವಾರ್ಡ್ಗಳಲ್ಲಿ ಸೈಕಲ್ ತುಳಿ ಸಮಸ್ಯೆ ತಿಳಿ ಘೋಷಣೆಯೊಂದಿಗೆ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು ಎಂದು ಹೇಳಿದರು.
ವಿಶೇಷ ಅನುದಾನದಲ್ಲಿ ೧೦ ಕೋಟಿ ರೂ, ನಗರಸಭೆ ಅನುದಾನದಲ್ಲಿ ೩ ಕೋಟಿ ರೂ, ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ರವರ ಅನುದಾನದಲ್ಲಿ ೨ ಕೋಟಿ ಸೇರಿ ಒಟ್ಟು ಸುಮಾರು ೧೭ ಕೋಟಿ ರೂ ವೆಚ್ಚದಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಯುಜಿಡಿ ಅಮೃತ್ ಯೋಜನೆಯಿಂದ ಹಾನಿಯಾಗಿದ್ದ ರಸ್ತೆಗಳನ್ನು ಈಗ ಸುಸ್ಥಿತಿಯಲ್ಲಿ ಡಾಂಬರೀಕರಣ ಮಾಡುವ ಮೂಲಕ ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಲಾಗಿದೆ. ಡಾಂಬರಿಕರಣದ ಬಳಿಕ ರಸ್ತೆ ಸಮರ್ಪಕವಾಗಲು ಸುಮಾರು ೧೫ ದಿನಗಳು ಬೇಕಾಗುತ್ತದೆ. ಈ ಮಧ್ಯೆ ಕಳಪೆ ಕಾಮಗಾರಿಯಾಗಿದ್ದರೆ ಸಾರ್ವಜನಿಕರು ನೇರವಾಗಿ ನಗರಸಭಾಧ್ಯಕ್ಷರು, ಪೌರಾಯುಕ್ತರಾದ ನನಗೆ ಹಾಗೂ ನಗರಸಭೆ ಇಂಜಿನಿಯರ್ಗೆ ದೂರು ಸಲ್ಲಿಸಿದರೆ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎ.ಸಿ.ಕುಮಾರ್ಗೌಡ, ಮಾಜಿ ಸದಸ್ಯ ದಿನೇಶ್, ಇಂಜಿನಿಯರ್ಗಳಾದ ಲೋಕೇಶ್, ಸೌಜನ್ಯ ಮತ್ತಿತರರು ಉಪಸ್ಥಿತರಿದ್ದರು.
All roads in the city will be paved with quality asphalt.
Leave a comment