ಚಿಕ್ಕಮಗಳೂರು: ಕಾಲಕಾಲಕ್ಕೆ ರಾಜ್ಯ ಸರಕಾರ ಬಿಸಿಯೂಟ ಅಡುಗೆಯವರಿಗೆ ಗೌರವಧನ ಹೆಚ್ಚಿಸುತ್ತಲೇ ಬಂದಿದೆ. ಆದರೆ, ಕೇಂದ್ರಸರಕಾರ ತನ್ನ ಪಾಲನ್ನು ಆರಂಭದಿಂದಲೂ ಹೆಚ್ಚಿಸಿಲ್ಲ. ಸಂಘಟನಾತ್ಮಕ ಹೋರಾಟದಿಂದ ಸಮ ಪಾಲನ್ನು ಪಡೆಯಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಅಡಿ ನಗರದ ಎಂಇಎಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಡುಗೆ ಸಿಬ್ಬಂದಿ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಕ್ಷರದಾಸೋಹ ಬಿಸಿಯೂಟ ಕಾರ್ಯಕ್ರಮ ಜಾರಿಯಾಗುತ್ತದೆ. ಆರಂಭದಲ್ಲಿ ಈಶಾನ್ಯ ಕರ್ನಾಟಕದಲ್ಲಿ ಜಾರಿಯಾಗಿ ನಂತರ ರಾಜ್ಯಾದ್ಯಂತ ವಿಸ್ತರಣೆಯಾಗಿದೆ.
ಬಿಸಿಯೂಟ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದಿಂದ ಶೇ.೬೦ ರಷ್ಟು ಹಣ, ರಾಜ್ಯದಿಂದ ಶೇ.೪೦ ರಷ್ಟು ಅನುದಾನದ ಒಪ್ಪಂದದಲ್ಲಿ ಈ ಯೋಜನೆ ಆರಂಭವಾಯಿತು. ಆರಂಭದಲ್ಲಿ ರಾಜ್ಯ ೪೦೦ ರೂ., ಕೇಂದ್ರ ೬೦೦ ರೂ. ಸೇರಿ ೧ ಸಾವಿರ ನೀಡಲಾಗುತ್ತಿತ್ತು. ಯೋಜನೆ ಆಂಭವಾಗಿ ಇಲ್ಲಿಗೆ ೨೩ ವರ್ಷ ಕಳೆದಿದೆ. ಆದರೆ, ಇಂದಿಗೂ ಕೇಂದ್ರ ತನ್ನ ಪಾಲಿನ ಕೇವಲ ೬೦೦ ರೂ. ಮಾತ್ರ ನೀಡುತ್ತಿದೆ.
ಆದರೆ, ರಾಜ್ಯ ಸರಕಾರ ೪೦೦ ರಿಂದ ೪ ಸಾವಿರ ರೂ ಗೆ ಗೌರವಧನ ಹೆಚ್ಚಿಸಿದೆ. ಕೇಂದ್ರವೂ ೬ ಸಾವಿರ ನೀಡಿದ್ದರೆ ಇಂದು ನೀವು ೧೦ ಸಾವಿರ ರೂ ಗೌರವಧನ ಪಡೆಯಬಹುದಿತ್ತು ಎಂದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದೆ. ಆ ಪಕ್ಷದ ಮುಖಂಡರು ಮುಂದೊಂದು ದಿನ ನಿಮ್ಮ ಬಳಿಗೆ ಬಂದೇ ಬರುತ್ತಾರೆ. ಆಗ ಈ ಬಗ್ಗೆ ಪ್ರಶ್ನಿಸಿ. ಅಲ್ಲದೆ ಬಿಸಿಯೂಟ ಅಡುಗೆ ಸಿಬ್ಬಂದಿ ಸಂಘಟನಾತ್ಮಕವಾಗಿ ಹೋರಾಟ ರೂಪಿಸಿದರೆ ಕೇಂದ್ರದ ಪಾಲನ್ನು ಪಡೆಯುವುದು ಅಸಾಧ್ಯವಾದುದೇನಲ್ಲ ಎಂದರು. ಮುಂದಿನ ರಾಜ್ಯ ಬಜೆಟ್ ನಲ್ಲಿ ಅಡುಗೆಯವರಿಗೆ ಗೌರವಧನ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದೆ ಇಡುತ್ತೇನೆ ಎಂದರು.
ಅಕ್ಷರದಾಸೋಹ ಫೆಡರೇಶನ್ ಕಾರ್ಯದರ್ಶಿ ವಿಜಯ್ಕುಮಾರ್ ಮಾತನಾಡಿ. ಹೋರಾಟದಿಂದ ಅಡುಗೆ ಸಿಬ್ಬಂದಿ ವೇತನ ಹೆಚ್ಚಿಸುತ್ತಲೆ ಬಂದಿದ್ದೇವೆ. ೨೩ ವರ್ಷದ ಹೋರಾಟದ ಫಲ ಇಂದು ೪೭೦೦ ರೂ.ಗೆ ಬಂದಿದೆ. ಅದೇ ಅಂತಿಮವಲ್ಲ. ಸಂಘದ ಕಾರ್ಯಕ್ರಮಗಳಿಗೆ ಶೇ.೫೦ ಜನ ಮಾತ್ರ ಬರುತ್ತಿದ್ದೀರಿ. ಪೂರ್ಣ ಪ್ರಮಾಣದಲ್ಲಿ ಸಂಘಕ್ಕೆ ಬಂದಲ್ಲಿ ನಿಮ್ಮ ಬೇಡಿಕೆಗಳ ಸಂಪೂರ್ಣ ಈಡೇರಿಕೆಗೆ ಸಹಾಯವಾಗಲಿದೆ ಎಂದರು.
ಪಿಎಂ ಪೋಷಣ್ ಶಿಕ್ಷಣಾಕಾರಿ ಎಸ್.ಪಿ.ನಟರಾಜ್ ಮಾತನಾಡಿ, ಇಡೀ ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಾಲಾ ಮಕ್ಕಳಿಗಾಗಿ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುವ ಮೂಲಕ ವಿದ್ಯೆಗೆ ಪೂರಕವಾದ ವಾತಾವರಣ ಕಲ್ಪಿಸಲು ಮುಂದಾಗಿವೆ ಎಂದರು. ಶಿಕ್ಷಣ ಅಕಾರಿ ನೀಲಕಂಠ ಸ್ವಾಗತಿಸಿದರು. ಅಕ್ಷರದಾಸೋಹ ಫೆಡರೇಶನ್ ಅಧ್ಯಕ್ಷ ಜಿ.ರಘು, ಬಿಇಒ ರುದ್ರಪ್ಪ, ನಟರಾಜ್, ತಾಪಂ ಇಒ ವಿಜಯ್ಕುಮಾರ್, ಇಂಧುಮತಿ, ಸಮೀಮಾಭಾನು, ಕಾಂತರಾಜು, ಅಂಜನಪ್ಪ, ಪೂರ್ಣೇಶ್ ಮತ್ತಿತರರಿದ್ದರು.
It is possible to achieve equality through organized struggle.
Leave a comment