ಚಿಕ್ಕಮಗಳೂರು: ಪ್ರೇಯಸಿಗೆ ಕೈಕೊಟ್ಟು ಬೇರೆ ಯುವತಿ ಜತೆಗೆ ಮದುವೆಯಾದ ಯುವಕನಿಂದ ಮೋಸ ಹೋದ ಯುವತಿ ಮದುವೆ ಮಂಟಪಕ್ಕೆ ನೇರವಾಗಿ ಬಂದು ಮದುವೆಗೆ ಒತ್ತಾಯಿಸಿರುವ ಘಟನೆ ಚಿಕ್ಕಮಗಳೂರು ನಗರದ ದೊಡ್ಡಗೌಡ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದಿದೆ.
ಕಳೆದ ೧೦ ವರ್ಷದಿಂದ ಶರತ್ ಎಂಬಾತನನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಮೋಸ ಮಾಡಿದ್ದಾನೆ ಎಂದು ಹಾಸನ ಜಿಲ್ಲೆ ಬೇಲೂರು ಮೂಲದ ಯುವತಿ ಆರೋಪಿಸಿದ್ದಾರೆ. ಶರತ್ ಮದುವೆಯಾಗುತ್ತಿರುವ ವಿಷಯ ತಿಳಿದ ಯುವತಿ ನೇರವಾಗಿ ಮದುವೆ ಮಂಟಪಕ್ಕೆ ಬಂದು ನೀನು ಮೋಸ ಮಾಡಿದ್ದೀಯಾ, ಈಗ ನನ್ನನ್ನು ಮದುವೆಯಾಗುತ್ತೀಯಾ ಇಲ್ಲವೆ ಎಂದು ರಂಪಾಟ ಮಾಡಿದ್ದು, ಶರತ್ ಮೋಸಮಾಡುತ್ತಿರುವ ವಿಚಾರವಾಗಿ ಕಳೆದ ೮ ತಿಂಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ.
ಶನಿವಾರ ಶರತ್ ಮನೆಮುಂದೆ ಏಕಾಂಗಿ ಹೋರಾಟ ಮಾಡಿದ್ದ ಯುವತಿ ಭಾನುವಾರ ಮದುವೆ ಮಂಟಪಕ್ಕೆ ಬಂದು ರಂಪಾಟ ನಡೆಸಿದ್ದಾಳೆ. ಮದುವೆ ಮಂಟಪದೊಳಗೆ ಧರಣಿ ಕುಳಿತಿದ್ದಾಳೆ. ಕೊನೆಗೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಯುವತಿ ಅಶ್ವಿನಿ ಮಾತನಾಡಿ, ಶರತ್ ಇದೇ ಮಂಟಪದಲ್ಲಿ ನನ್ನ ಮದುವೆಯಾಗಬೇಕು. ಅಲ್ಲಿಯವರೆಗೂ ನಾನು ಹೋರಾಟ ಮಾಡುತ್ತೇನೆ. ನಾನು ಬರುವ ಮೊದಲೇ ಮದುವೆಯಾಗಿದೆ. ಈಗ ನನ್ನನ್ನು ಶರತ್ ಮದುವೆಯಾಗಬೇಕು ಎಂದು ಒತ್ತಾಯಿಸಿದರು.
ಮಂಟಪದೊಳಗೆ ಪ್ರವೇಶಿಸುತ್ತಿದ್ದಂತೆ, ಹುಡುಗನ ಕಡೆಯವರು ಬಾಗಿಲು ಹಾಕಿಕೊಂಡರು. ಹುಡುಗನ ಕಡೆಯವರು ನನ್ನ ಮೇಲೆ ಹಲ್ಲೆ ಮಾಡಿ, ಎಳೆದಾಡಿದ್ದಾರೆಂದು ಇದೇ ವೇಳೆ ಆರೋಪಿಸಿದರು.
ಅಲ್ಲದೆ, ಸ್ಥಳದಲ್ಲಿದ್ದವರು ವಿಡಿಯೋ ಮಾಡದಂತೆ ಶರತ್ ಕುಟುಂಬದವರು ಕ್ಯಾಮರಾಗಳಿಗೆ ಅಡ್ಡ ಬಂದಿದ್ದಾರೆ. ಗಲಾಟೆ ತೀವ್ರವಾದ ಕಾರಣ, ಮದುವೆ ಮನೆಯವರು ದಿಢೀರನೆ ಕಲ್ಯಾಣ ಮಂಟಪವನ್ನು ಖಾಲಿ ಮಾಡಿ ಸ್ಥಳದಿಂದ ನಿರ್ಗಮಿಸಿದ್ದಾರೆ. ನ್ಯಾಯಕ್ಕಾಗಿ ಯುವತಿಯ ಹೋರಾಟ ಮುಂದುವರಿದಿದೆ.
The mistress’s rampage in the wedding house of the Kalyana Mantapa….!
Leave a comment