ಚಿಕ್ಕಮಗಳೂರು: ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳು ದೇಶಕ್ಕೆ ತಂದು ಕೊಟ್ಟ ಸ್ವಾತಂತ್ರ್ಯದಿಂದ ಇಂದು ದೇಶದಲ್ಲಿ ಸರ್ವಧರ್ಮ, ಶಾಂತಿ, ಸೌಹಾರ್ದತೆಯಿಂದ ಜನರು ಬದುಕುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಭದ್ರಾ ಕಾಡಾ ನಿಗಮದ ಅಧ್ಯಕ್ಷರೂ ಆದ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿಯವರ ೧೫೬ ನೇ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ಬಹದ್ದೂರ್ ಶಾಸ್ತ್ರಿಯವರ ೧೨೧ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಅವರ ಆದರ್ಶ ಮೌಲ್ಯಗಳು ಎಂದಿಗೂ ಅಳಿಯಲಾರವು ಎಂದು ತಿಳಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ಮಹಾತ್ಮಗಾಂಧೀಜಿಯವರು ಭಾರತಕ್ಕೆ ಮಾತ್ರ ನಾಯಕರಲ್ಲ ಬದಲಾಗಿ ಇಡೀ ವಿಶ್ವಕ್ಕೆ ನಾಯಕರಾಗಿದ್ದಾರೆ. ಗಾಂಧೀಜಿಯವರ ಹತ್ಯೆ ನಂತರ ಭಾರತ ದೇಶ ಸೇರಿದಂತೆ ಇಡೀ ವಿಶ್ವವೇ ತಮ್ಮ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವ ಮೂಲಕ ಅವರಿಗೆ ಗೌರವವನ್ನು ಸೂಚಿಸಿವೆ ಎಂದರು.
ಭಾರತ ದೇಶಕ್ಕೆ ದೊಡ್ಡ ಇತಿಹಾಸವೇ ಇದೆ. ಮಹಾತ್ಮಗಾಂಧಿ ಅವರು ಸತ್ಯ, ಅಹಿಂಸೆ, ಸತ್ಯಾಗ್ರಹ ಮೂಲಕ ದೇಶದಿಂದ ಬ್ರಿಟಿಷರನ್ನು ಹೊಡಿಸಲು ಸಹಕಾರಿಯಾಗಿದೆ. ಈ ದೇಶದಲ್ಲಿ ಯಾವುದೇ ರಕ್ತಪಾತವಾಗದೆ, ಹಿಂಸೆ ಆಗದೆ, ಸ್ವಾತಂತ್ರ್ಯ ಪಡೆದ ಏಕೈಕ ದೇಶವೆಂದರೆ ನಮ್ಮ ಭಾರತ ದೇಶ ಎಂದು ಹೇಳಿದರು.
ಬಿಜೆಪಿಯವರಿಗೆ ಮಹಾತ್ಮಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಗೌರವವಿದ್ದರೆ, ನಾಗಪುರದ ಆರ್ಎಸ್ಎಸ್ ಮುಖ್ಯ ಶಾಖೆಯಲ್ಲಿ ಮಹಾತ್ಮಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡುವಂತೆ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆದರ್ಶ ಮೌಲ್ಯಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿದೆ. ಬಿಜೆಪಿಯವರು ಗಾಂಧಿಯವರನ್ನು ದೂಷಿಸಿ, ನಾಥೂರಾಂ ಗೂಡ್ಸೆ ಅವರನ್ನು ವೈಭವಿಕರಿಸುವುದು ಸರಿಯಾದ ಸಿದ್ದಾಂತವಲ್ಲ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ ಉಪಾಧ್ಯಕ್ಷರಾದ ಕೆ.ಮಹಮದ್ ಮಾತನಾಡಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಿದರು.
ಈ ಸಂದಭದಲ್ಲಿ ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಸಿಡಿಎ ಸದಸ್ಯ ಶೃದೀಪ್, ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಜೇಮ್ಸ್ ಡಿಸೋಜಾ, ಸುರೇಶ್ ಕುಮಾರ್, ಲಕ್ಷ್ಮಣ್ ಹುಣಸೇಮಕ್ಕಿ, ನಾಗೇಶ್, ಕೆ.ಭರತ್ ಉಪ್ಪಳ್ಳಿ, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Gandhi Jayanti at the District Congress Office
Leave a comment