ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರಾಜ್ಯಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿರುವುದನ್ನು ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಖಂಡಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ಭರತೇಶ್ ಭರತ್ ಅವರು ಕೇಂದ್ರ ಸರ್ಕಾರದ ಜಿಎಸ್ಟಿ, ಟೋಲ್, ರಸಗೊಬ್ಬರ, ಬಿತ್ತನೆ ಬೀಜ, ಸಿಮೆಂಟ್, ಕಬ್ಬಿಣ ಇನ್ನಿತರೆ ದಿನನಿತ್ಯ ವಸ್ತುಗಳ ಬೆಲೆಯನ್ನು ಆನ್ಲೈನ್ನಲ್ಲಿ ಏರಿಸಿರುವ ಬಗ್ಗೆ ಆರೋಪಿಸಿದರು.
ಇದರಿಂದ ಜನಸಾಮಾನ್ಯರು, ರೈತರ ಕುಟುಂಬಕ್ಕೆ, ಯುವಕರು, ಮಧ್ಯಮ ವರ್ಗದವರಿಗೆ ತುಂಬ ಹೊರೆಯಾಗಿದ್ದು, ರಾಜ್ಯದ ೧೭ ಬಿಜೆಪಿ ಸಂಸದರು ಆಯ್ಕೆಯಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ರೀತಿ ಪ್ರಶ್ನಿಸದೆ ಮೌನವಾಗಿರುವ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸುವ ಅಗತ್ಯ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಈವರೆಗೆ ಹೊರ ರಾಜ್ಯಗಳಲ್ಲಿ ರಾಜಕೀಯ ಮಾಡುತ್ತಿದ್ದರು. ಈಗ ಏಕಾಏಕಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೋರಾಟ ಮಾಡುತ್ತಿರುವುದು ಅವರ ಕೀಳುಮಟ್ಟದ ರಾಜಕೀಯವನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.
ಜನಪರವಾದ ಜನಸಾಮಾನ್ಯರಿಗೆ ಪೂರಕವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬಡವರ ಆರ್ಥಿಕ ಮಟ್ಟ ಸುಧಾರಣೆಗೆ ಶಕ್ತಿ ತುಂಬುತ್ತಿರುವ ರಾಜ್ಯಸರ್ಕಾರದ ವಿರುದ್ಧ ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳು ಸಾಮಾಜಿಕವಾಗಿ ಶಕ್ತಿ ತುಂಬಿವೆ. ಅಂತಹ ಯೋಜನೆಗಳನ್ನು ಬಿಜೆಪಿ ಮುಖಂಡರು ತಿರಸ್ಕರಿಸಿ ಸರ್ಕಾರಕ್ಕೆ ವಾಪಾಸ್ ನೀಡುವಂತೆ ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಾಲ್ಲೂಕಿನಲ್ಲಿ ಎಷ್ಟು ಆಶ್ರಯ ಮನೆಗಳನ್ನು ವಿತರಿಸಿದ್ದಾರೆ ಎಂಬ ಬಗ್ಗೆ ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಧ್ಯದಲ್ಲೇ ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಹೋರಾಟ ರೂಪಿಸಲು ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದೇಶ್ ಲಕ್ಯಾ, ಬೀರೇಗೌಡ, ಚಂದ್ರೇಗೌಡ, ರಾಮೇಗೌಡ, ಚಂದ್ರಶೇಖರ್, ಶಶಿಧರ್, ಮಧು ಉಪಸ್ಥಿತರಿದ್ದರು.
Kisan Cell condemns BJP protest in Gram Panchayat limits
Leave a comment