ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ನಿಲುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಇಂದು ರಸ್ತೆತಡೆ ನಡೆಸಿದ್ದಾರೆ.
ಗ್ರಾಮದ ಮೂಲಕ ಚಿಕ್ಕಮಗಳೂರಿಗೆ ಹಾಸನ, ಬೆಂಗಳೂರು, ಮೈಸೂರಿನಿಂದ ಪ್ರತಿನಿತ್ಯ ನೂರಾರು ಬಸ್ಗಳು ಸಂಚಾರ ನಡೆಸುತ್ತವೆ. ಆದರೆ, ಗ್ರಾಮದಲ್ಲಿ ಬಸ್ ನಿಲುಗಡೆ ಇಲ್ಲದಿರುವುದರಿಂದ ಪ್ರತಿನಿತ್ಯ ಕೆಲಸಕ್ಕೆ ತೆರಳುವವರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅಲ್ಲದೇ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದೆ, ಇದರಿಂದ ಗ್ರಾಮದ ಮಹಿಳೆಯರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ರಸ್ತೆತಡೆ ನಡೆಸಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪಟ್ಟು ಹಿಡಿದು ಕೂತರು, ಹೀಗಾಗಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.
ಗ್ರಾ.ಪಂ ಮಾಜಿ ಅಧ್ಯಕ್ಷ ರಘುನಂದನ್ ಮಾತನಾಡಿ, ಕಳೆದ ೧೫ ದಿನಗಳಿಂದ ಇಲ್ಲಿ ಬಸ್ ನಿಲುಗಡೆ ಮಾಡುವಂತೆ ಕೋರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
ಗ್ರಾಮಕ್ಕೆ ಬರುವ ಬಸ್ ಸರಿಯಾಗಿ ನಿಗದಿತ ಸಮಯಕ್ಕೆ ಬರುತ್ತಿಲ್ಲ, ಈ ಬಗ್ಗೆ ಪ್ರಶ್ನಿಸಿದರೆ ಬಸ್ ಕೆಟ್ಟು ಹೋಗಿದೆ, ಪರ್ಯಾಯ ಬಸ್ ಇಲ್ಲ ಎಂಬ ಸಬೂಬುಗಳು ಹೇಳುತ್ತಾರೆ, ಬೆಂಗಳೂರು, ಮೈಸೂರು ಕಡೆಯಿಂದ ರಾತ್ರಿ ಸಮಯದಲ್ಲಿ ಬರುವ ಪ್ರಯಾಣಿಕರಿಗೆ ಇಲ್ಲಿ ಬಸ್ ನಿಲುಗಡೆ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ. ಈ ಸಂಬಂಧ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿಗಳಿಗೆ, ಗ್ರಾಮಾಂತರ ಠಾಣೆಗೆ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಗ್ರಾಮಗಳಿಗೆ ಸರ್ಕಾರಿ ಬಸ್ಸುಗಳನ್ನು ಬಿಡದೆ ಗ್ರಾಮಸ್ಥರಿಗೆ ಬಹಳ ತೊಂದರೆಯಾಗಿದೆ, ಶಕ್ತಿ ಯೋಜನೆಯಿಂದ ನಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ಸುಗಳು ಇಲ್ಲದೆ ಶಕ್ತಿ ಯೋಜನೆ ಎಲ್ಲಿ ಜಾರಿ ಬಂದಿದೆ, ಗ್ರಾಮಕ್ಕೆ ಸರ್ಕಾರಿ ಬಸ್ಸುಗಳನ್ನು ಬಿಡುವುದರ ಜೊತೆಗೆ ವೇಗದೂತ ಬಸ್ಸುಗಳನ್ನು ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ವೇಗದೂತ ಬಸ್ಗಳನ್ನು ಗ್ರಾಮದಲ್ಲಿ ನಿಲುಗಡೆ ಮಾಡುವಂತೆ ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗಳು ಆದೇಶಿಸಿದ್ದರೂ ಚಾಲಕ ಹಾಗೂ ನಿರ್ವಾಹಕರು ಇದನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ಈ ನಿಲ್ದಾಣದಲ್ಲಿ ಬಸ್ ನಿಲ್ಲಿಸದೇ ಹೋಗುವ ನಿರ್ವಾಹಕರು ಮತ್ತು ಚಾಲಕರ ವಿರುದ್ಧ ದೂರು ಬಂದರೆ ನೋಟೀಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಗ್ರಾಮಸ್ಥರಾದ ದಿನೇಶ್ ಮಾತನಾಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಿರಿಯ ನಾಗರೀಕರಿಗೆ ಹಾಗೂ ಮಹಿಳೆಯರಿಗೆ ಬಸ್ಸ್ ನಿಲ್ಲಿಸದೆ ಹೋಗುತ್ತಿರುವ ಕಾರಣ ಮನವಿ ನೀಡಲಾಗಿತ್ತು, ಹಿರಿಯ ಅಧಿಕಾರಗಳ ಬಸ್ ನಿಲ್ಲಿಸುವಂತೆ ಆದೇಶ ಹೋರಡಿಸಿದರು ಸಹ ಬಸ್ ಸಿಬ್ಬಂದಿಗಳು ಬಸ್ ನಿಲ್ಲಿಸದ ಕಾರಣ ರಸ್ತೆ ತಡೆ ನೆಡೆಸಿ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ನಳಿನಾಕ್ಷಿ ಮಾತನಾಡಿ ಮಹಿಳೆಯರಿಗೆ ಅನುಕೂಲವಾಗುವಂತೆ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರು ಇಲ್ಲಿ ಅದರ ಸದುಪಯೋಗವಾಗುತ್ತಿಲ್ಲ, ಇಂತಹ ಯೋಜನೆಗಳ ಆಮಿಷವನ್ನು ತೊರಿಸಿ ಜನರಿಂದ ಮತಗಳನ್ನು ಪಡೆದ ಸರ್ಕಾರ ಇದರತ್ತ ಗಮನ ಅರಿಸಬೇಕಾಗಿದೆ ಎಂದರು.
ವಿದ್ಯಾರ್ಥಿ ಪುಣ್ಯ ಮಾತನಾಡಿ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಸರಿಯಾದ ಸಮಯಕ್ಕೆ ಶಾಲೆಗೆ ಹೊಗಲು ಸಾದ್ಯವಾಗುತ್ತಿಲ್ಲ, ಪ್ರತಿ ನಿತ್ಯ ಆಟೋದಲ್ಲಿ ಹೋಗುವಷ್ಟು ಅನುಕೂಲತೆಯು ಇಲ್ಲ, ಇದು ಒಂದು ದಿನದ ಸಮಸ್ಯೆಯಲ್ಲ, ಪ್ರತಿ ದಿನದ ಸಮಸ್ಯೆಯಾಗಿದೆ, ಹಲವು ಬಾರಿ ಮನವಿ ಮಾಡಿದರು ಸಹ ಯಾವುದೇ ರೀತಿಯ ಸ್ಪಂದನೆ ದೊರೆಯದೆ ಇರುವುದರಿಂದ ಇಂದು ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಹೋರಾಟ ಮಾಡಲಾಗುತ್ತಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ತಹಶೀಲ್ದಾರ್ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಬಸ್ ನಿಲುಗಡೆಯ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ರಸ್ತೆತಡೆ ಕೈಬಿಟ್ಟಿದ್ದಾರೆ.
Villagers protest demanding bus parking in Muguluvalli
Leave a comment