ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ವರುಣನ ಅಬ್ಬರ ಜೋರಾಗಿದ್ದು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ನಿನ್ನೆಯೂ ಮಲೆನಾಡಿನ ಹಲವು ಪ್ರದೇಶಗಳಲ್ಲಿ ಆರ್ಭಟಿಸಿದ್ದ ಮಳೆರಾಯ, ಇಂದು ಕೂಡ ತನ್ನ ರೌದ್ರಾವತಾರವನ್ನು ಮುಂದುವರಿಸಿದ್ದಾನೆ. ಇದರಿಂದಾಗಿ ಮಲೆನಾಡಿನ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿಶೇಷವಾಗಿ ಮೂಡಿಗೆರೆ ತಾಲೂಕಿನ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆ ಅಬ್ಬರಿಸಿದ್ದು, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಹಾಗೂ ಆಲ್ಲೂರು ಸುತ್ತಮುತ್ತ ಭಾರೀ ಮಳೆಯಾಗಿದೆ. ಭಾರೀ ಗಾಳಿ ಮತ್ತು ಗುಡುಗು ಸಹಿತ ಸುರಿದ ಈ ಮಳೆಯಿಂದಾಗಿ ವಾಹನ ಸವಾರರು ನಿಂತಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಯಿತು.
ಚಾರ್ಮಾಡಿ ಘಾಟ್ ನಲ್ಲಿ ಹೆಚ್ಚುತ್ತಿರುವದರಿಂದ ವಾಹನಗಳು ನಿಧಾನವಾಗಿ ಸಂಚರಿಸಿದ ದೃಶ್ಯಗಳು ಕಂಡುಬಂತು. ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಪ್ರಕೃತಿಯ ವಿಕೋಪಕ್ಕೆ ಜನಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಗಬ್ಬಲ್ ಸಮೀಪದ ಕಲ್ಮನೆ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದು ದಿಢೀರ್ ಮಳೆಗೆ ತತ್ತರಿಸಿದೆ. ಸೋಮವಾರ ಮಧ್ಯಾಹ್ನ ಒಂದು ಗಂಟೆ ಕಾಲ ಬೀಸಿದ ಭಾರೀ ಗಾಳಿ ಮತ್ತು ಮಳೆಯ ಆರ್ಭಟಕ್ಕೆ ಮದುವೆ ಮನೆಯಲ್ಲಿದ್ದ ಶಾಮಿಯಾನ ಮತ್ತು ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿ ಹಾರಿ ಹೋಗಿವೆ.
ಊಟಕ್ಕೆ ಹಾಕಲಾಗಿದ್ದ ಶಾಮಿಯಾನ ಮುರಿದು ಬಿದ್ದಿದ್ದರಿಂದ ಮದುವೆಗೆ ಆಗಮಿಸಿದ್ದ ಅತಿಥಿಗಳು ಮತ್ತು ಸಂಬಂಧಿಕರು ದಿಕ್ಕುತೋಚದೆ ಪರದಾಡುವಂತಾಯಿತು. ಮಳೆ ನಿಂತ ನಂತರ ಅಸ್ತವ್ಯಸ್ತಗೊಂಡಿದ್ದ ಮದುವೆ ಮನೆಯಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ನಿಂತು ಊಟ ಮಾಡಿ ಅಲ್ಲಿಂದ ನಿರ್ಗಮಿಸಿದರು. ಮದುವೆಯ ಸಂಭ್ರಮಕ್ಕೆ ಮಳೆರಾಯ ಅಡ್ಡಿಪಡಿಸಿದ್ದರಿಂದ ವಧು-ವರರ ಕುಟುಂಬದವರು ಮತ್ತು ಅತಿಥಿಗಳು ಹೈರಾಣಾದ್ರು.
Varuna’s storm in the Malnad region
Leave a comment