ಚಿಕ್ಕಮಗಳೂರು :
ಕಳೆದ ನವಂಬರ್ 4 ರಿಂದ ಆರಂಭಗೊಂಡಿರುವ ಶ್ರೀರಾಮಸೇನೆ ಪ್ರಾಯೋಜಿತ ದತ್ತಮಾಲಾ ಅಭಿಯಾನ ಇದೇ ನ.10 ಕ್ಕೆ ಅಂತ್ಯಗೊಳ್ಳಲಿದೆ ಈ ಹಿನ್ನೆಲೆ ವೀಕ್ ಎಂಡ್ ಕಾಫಿನಾಡಿನ ಪ್ರವಾಸಿತಾಣ ಮುಳ್ಳಯ್ಯನಗಿರಿ ಸೇರಿದಂತೆ ಕೆಲ ಪ್ರದೇಶಗಳಿಗೆ ಪ್ರವೇಶ ಬಂದ್ ಆಗಿರಲಿದೆ.
ಮುಳ್ಳಯ್ಯನಗಿರಿ, ಇನಾಮ್ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪೀಠ, ಗಾಳಿಕೆರೆ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರಗಳಿಗೆ ಪ್ರವಾಸಿಗರ ಭೇಟಿ ಬಂದ್ ಗೊಳಿಸಲಾಗಿದೆ. ಪಶ್ಚಿಮಘಟ್ಟಗಳ ತಪ್ಪಲಿನ ಪ್ರವಾಸಿ ತಾಣಗಳಿಗೆ ಈ ವಾರಾಂತ್ಯ ಆಗಮನ ನಿರ್ಬಂಧಿಸಲಾಗಿದೆ. ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ಕೊನೆ ದಿನಗಳಾದ್ದರಿಂದ ಎರಡು ದಿನಗಳು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ನವೆಂಬರ್ ೯ ರ ಶನಿವಾರ ಹಾಗೂ ನವೆಂಬರ್ ೧೦ ರ ಭಾನುವಾರ ಎರಡೂ ದಿನಗಳು ಪ್ರವಾಸಿಗರಿಗೆ ನಿರ್ಬಂಧವನ್ನು ಜಿಲ್ಲಾಡಳಿತ ಆದೇಶಿಸಿದೆ. ಆ ಎರಡು ದಿನಗಳು ದತ್ತ ಮಾಲಾಧಾರಿಗಳಿಗೆ ಮಾತ್ರ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಮುಳ್ಳಯ್ಯನಗಿರಿ ಘಟ್ಟದ ಸಾಲಿಗೆ ನಿರ್ಬಂಧ ಹೇರಿರುವುದು ದೂರದ ಊರುಗಳಿಂದ ಆಗಮಿಸೊ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ಇಂದು ಪ್ರವಾಸಿಗರಿಗೆ ನಿರ್ಬಂಧದ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಐ.ಡಿಪೀಠ ಭಾಗಗಳು ಬಿಕೋ ಎನ್ನಲಿವೆ.
Leave a comment