ಚಿಕ್ಕಮಗಳೂರು: ಕೇಂದ್ರ ಸರ್ಕಾರ ದೇಶಕ್ಕೆ ಅನ್ನ ನೀಡುವ ರೈತರ ಮಾನ ಹರಾಜು ಹಾಕುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ದೂರಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸರ್ಫೇಸಿ ಕಾಯ್ದೆಯಡಿ ಸಾಲ ಮರುಪಾವತಿಸದ ರೈತರ ಆಸ್ತಿಯನ್ನು ಆನ್ಲೈನ್ ಮೂಲಕ ಹರಾಜು ಹಾಕಲಾಗುತ್ತಿತ್ತು. ಈಗ ಹರಾಜು ನಡೆಸುವ ಕುರಿತು ಗ್ರಾಮದಲ್ಲಿ ಬ್ಯಾಂಕಿನವರು ಡಂಗುರ ಸಾರುವ ಮೂಲಕ ರೈತರ ಮಾನ, ಮರ್ಯಾದೆ ಹರಾಜು ಹಾಕುತ್ತಿದ್ದಾರೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ನಿಯೋಗ ತೆರಳಿ ಸರ್ಫೇಸಿ ಕಾಯ್ದೆ ಕುರಿತು ಮನವಿ ಸಲ್ಲಿಸಿದ್ದರು. ಬಳಿಕ ಎಚ್.ಡಿ. ದೇವೇಗೌಡ ಅವರು ಕೇಂದ್ರ ಹಣಹಾಸು ಸಚಿವೆ ನಿರ್ಮಲಾಸೀತಾರಾಮನ್ ಅವರನ್ನು ಭೇಟಿ ಮಾಡಿ ಕಾಫಿ ಬೆಳೆಯನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡುವಂತೆ ತಿಳಿಸಿದ್ದರು. ಕೂಡಲೇ ಆದೇಶ ಹೊರಡಿಸಿ ಹರಾಜು ನಿಲ್ಲಿಸುವಂತೆ ಭರವಸೆ ನೀಡಿದ್ದರು ಎಂದು ತಿಳಿಸಿದರು.
ಕೇಂದ್ರ ಸಚಿವರ ಹೇಳಿಕೆನೀಡಿದ ಎರಡು ದಿನದ ಮೇಲೆ ಸಾವಿರಾರು ರೈತರ ಆಸ್ತಿಯನ್ನು ಬ್ಯಾಂಕಿನವರು ಹರಾಜು ಹಾಕಿದ್ದು, ಮಾಜಿ ಪ್ರಧಾನಿಗಳ ಮನವಿಗೆ ಯಾವುದೇ ಬೆಲೆ ಕೇಂದ್ರ ಸರ್ಕಾರ ನೀಡದೆ ಮಾಜಿ ಪ್ರಧಾನಿಗಳಿಗೆ ಟೋಪಿ ಹಾಕಿದ್ದಾರೆ. ಕಣತಿಯಲ್ಲಿ ನಡೆಯುವ ಹರಾಜು ತಡೆಯಲು ರೈತ ಸಂಘದ ಮುಖಂಡರು ಮುಂದಾಗಬೇಕು. ಬ್ಯಾಂಕಿನವರು ಹರಾಜು ನಿಲ್ಲಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ರೈತರ ಆಸ್ತಿ ಹರಾಜು ಆಗುತ್ತಿದ್ದರೂ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಕಾಫಿ ಮಂಡಳಿ ಅಧ್ಯಕ್ಷರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ, ಪ್ರಗತಿಪರ ಸಂಘಟನೆಗಳೊಂದಿಗೆ ಹೋರಾಟ ರೂಪಿಸಲಾಗುವುದು ಎಂದರು.
ಅಡುಗೆ ಅನಿಲ ವಿತರಕರ ಸಂಘಟನೆ ಮುಖಂಡ ಎಂ.ಎಸ್.ಅನಂತ್ ಮಾತನಾಡಿ,ಕೊಲ್ಲಿ ರಾಷ್ಟ್ರಗಳಿಂದ ಶೇ.60 ರಷ್ಟು ಅಡುಗೆ ಅನಿಲ ಆಮದಾಗುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅಡುಗೆ ಅನಿಲದ ಅಭಾವ ಉಂಟಾಗಿದ್ದರಿಂದ ವಿತರಕರ ಮೇಲೆ ಒತ್ತಡ ಹೆಚ್ಚುತ್ತಿದ್ದು, ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ನಂಜೇಶ್ ಬೆಣ್ಣೂರು, ನಟರಾಜ್ ಎಸ್.ಕೊಪ್ಪಲು, ಶ್ರೀನಿವಾಸ ದೇವಾಂಗ, ಷರೀಫ್, ವಿಜಯಕುಮಾರ್ ಇದ್ದರು.
The central government is auctioning off farmers’ honor
Leave a comment