ಚಿಕ್ಕಮಗಳೂರು: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಬಾಲ್ಯ ವಿವಾಹ ತಡೆಯಲು ಹೋದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಘಟನೆ ನಡೆದಿದೆ.
ಕಾಲೋನಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕಪಡೆ ಅಧಿಕಾರಿಗಳು ಹಾಗೂ ಮಲ್ಲೇನಹಳ್ಳಿ ಪಿಡಿಒ ಮತ್ತು ಸಿಬ್ಬಂದಿ ವಿವಾಹವನ್ನು ತಡೆಯಲು ಸ್ಥಳಕ್ಕೆ ಧಾವಿಸಿದ್ದರು.
ಈ ವೇಳೆ ಸ್ಥಳದಲ್ಲಿ ಜನಸಮೂಹ ಜಮಾಯಿಸಿ ಗಲಾಟೆಯಾಗುವ ಮುನ್ಸೂಚನೆ ಸಿಕ್ಕ ತಕ್ಷಣ, ಇಲಾಖಾ ವಾಹನದಲ್ಲಿ ಭದ್ರತೆಗೆಂದು ಗ್ರಾಮಾಂತರ ಠಾಣೆಯ ಸಬ್ ಇನ್ಸೆಕ್ಟರ್ ರಘುನಾಥ್ ಎಸ್.ವಿ. ಹಾಗೂ ಜೀಪ್ ಚಾಲಕ ಸುನಿಲ್ ಕುಮಾರ್ (ಸಿಪಿಸಿ-75) ಸ್ಥಳಕ್ಕೆ ತಲುಪಿದ್ದಾರೆ.
ಅಧಿಕಾರಿಗಳು ಸಾರ್ವಜನಿಕರಿಗೆ ಬಾಲ್ಯ ವಿವಾಹದ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾಗ, ಅಲ್ಲಿಯೇ ಇದ್ದ ಸಚಿನ್ (29) ಎಂಬಾತ ಏಕಾಏಕಿ ಸಬ್ ಇನ್ಸೆಕ್ಟರ್ ರಘುನಾಥ್ ಅವರನ್ನು ತಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿ ದೂಡಿದ್ದಾನೆ. ಇದನ್ನು ತಡೆಯಲು ಮುಂದಾದ ಜೀಪ್ ಚಾಲಕ ಸುನಿಲ್ ಕುಮಾರ್ ಅವರ ಕೆನ್ನೆಗೆ ಹಾಗೂ ಮೈಕೈಗೆ ಹೊಡೆದು ಹಲ್ಲೆ ನಡೆಸಿದ್ದಲ್ಲದೆ, ಅವರು ಧರಿಸಿದ್ದ ಪೊಲೀಸ್ ಸಮವಸ್ತ್ರವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಹಲ್ಲೆಯ ಬಳಿಕ ಸ್ಥಳದಿಂದ ಓಡಿಹೋಗಲು ಯತ್ನಿಸಿದ ಆರೋಪಿ ಸಚಿನ್, ನಿಯಂತ್ರಣ ತಪ್ಪಿ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಆತನ ತಲೆಗೂ ಬಲವಾದ ಗಾಯವಾಗಿದೆ. ಸದ್ಯ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಸುನಿಲ್ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು. ಕರ್ತವ್ಯ ನಿರತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದರ್ಪ ತೋರಿದ ಸಚಿನ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
Police personnel attacked while trying to prevent child marriage
Leave a comment