ಚಿಕ್ಕಮಗಳೂರು : ಖಾತೆದಾರರ ಒಪ್ಪಿಗೆ ಪಡೆಯದೆ ಅವರ ಖಾತೆಯಿಂದ ಹಣ ಮುರಿದುಕೊಂಡು ವಿಮಾ ಪಾಲಿಸಿ ಖರೀದಿಸಿ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚ್ಯುಯಲ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆಯ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಡ್ಡಿ ಸಹಿತ ವಿಮಾ ಕಂತು ಮರಳಿಸುವಂತೆ ಆದೇಶ ನೀಡಿದೆ.
ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ರಾಧಾಕೃಷ್ಣ ಎಂಟರ್ಪ್ರೈಸಸ್ ಮಾಲೀಕ ಬಿ.ಟಿ.ಕೃಷ್ಣಕುಮಾರ್ ಎಂಬುವವರು ನಗರದ ಐ.ಜಿ.ರಸ್ತೆಯ ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಯನ್ನು ಹೊಂದಿದ್ದಾರೆ.
ಖಾತೆದಾರರು ಆರೋಪಿಸಿರುವಂತೆ ಬ್ಯಾಂಕ್ನವರು ಖಾತೆದಾರರ ಅನುಮತಿ ಇಲ್ಲದೆ, ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚ್ಯುಯಲ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆಯಿಂದ ಖಾತೆದಾರರ ಹೆಸರಿನಲ್ಲಿ ವಿಮಾ ಪಾಲಿಸಿಯನ್ನು ಖರೀದಿಸಿ ಕಂತು ಪಾವತಿಸಿದ್ದರೆನ್ನಲಾಗಿದೆ.
ಈ ಬಗ್ಗೆ ಬ್ಯಾಂಕ್ನವರೊಂದಿಗೆ ವ್ಯವಹರಿಸಿದ ಕೃಷ್ಣಕುಮಾರ್, ವಿಮಾ ಕಂತಿಗೆ ತಮ್ಮ ಖಾತೆಯಿಂದ ಮುರಿದುಕೊಂಡ ಹಣವನ್ನು ಬಡ್ಡಿ ಸಹಿತ ಮರಳಿಸುವಂತೆ ಸಾಕಷ್ಟು ಬಾರಿ ಕೋರಿಕೊಂಡರೂ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಸೇವಾ ನ್ಯೂನತೆ ಎಸಗಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಕುಮಾರ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ 2025ರ ಜನವರಿ 1 ರಂದು ದೂರು ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ದೂರುದಾರರ (ಖಾತೆದಾರ) ಖಾತೆಯಿಂದ ಮುರಿದ ಮೊದಲ ವರ್ಷದ ವಿಮಾ ಕಂತು ಮೊತ್ತ 9,66,185 ರೂ. ಹಾಗೂ ಈ ಮೊತ್ತಕ್ಕೆ 2015ರ ಜೂನ್ 9 ರಿಂದ ಇದುವರೆಗೆ ಮತ್ತು 2ನೇ ವರ್ಷದ ವಿಮಾ ಮೊತ್ತ 9,51,024 ರೂ. ಹಾಗೂ ಈ ಮೊತ್ತಕ್ಕೆ 2016ರ ಸೆಪ್ಟೆಂಬರ್ 23 ರಿಂದ ಇದುವರೆಗೆ ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಕೋಟಕ್ ಮಹೀಂದ್ರಾ ಓಲ್ಡ್ ಮ್ಯೂಚ್ಯುಯಲ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆ ದೂರುದಾರರಿಗೆ ಪಾವತಿಸುವುದು ಮತ್ತು ಪರಿಹಾರವಾಗಿ 50,000 ರೂ.ಗಳನ್ನು ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ 10,000 ರೂ.ಗಳನ್ನು ಸಹ ದೂರುದಾರರಿಗೆ ಪಾವತಿಸುವುದು,
ತೀರ್ಪನ್ನು 45 ದಿನಗಳೊಳಗಾಗಿ ಪಾಲಿಸಬೇಕಿದ್ದು, ತಪ್ಪಿದಲ್ಲಿ ಆದೇಶದ ಮೊತ್ತವನ್ನು ಪಾವತಿಸುವವರೆಗೆ ವಾರ್ಷಿಕ ಶೇ.6ರ ಬಡ್ಡಿಯನ್ನು ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
Order to refund insurance premiums with interest to customers
Leave a comment