ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ಆಂತರಿಕ ವಿಚಾರದಲ್ಲಿ ಬಾಹ್ಯ ವ್ಯಕ್ತಿಗಳ ಹಸ್ತಕ್ಷೇಪವನ್ನು ಸಂಘಟನೆ ಸಹಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ ಎಚ್ಚರಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತ ಸಂಘದ ತಾಲೂಕು ಅಧ್ಯಕ್ಷರಾಗಿದ್ದ ಸುನಿಲ್ಕುಮಾರ್ ಅವರನ್ನು ಉಚ್ಛಾಟನೆ ಮಾಡಿರುವ ಬಗ್ಗೆ ತುಳಸೇಗೌಡ ಮತ್ತು ದಯಾಕರ ಎಂಬುವರು ಹೇಳಿಕೆ ನೀಡಿದ್ದಾರೆ. ಮೂಲತಃ ಅವರು ರೈತ ಸಂಘದ ಸದಸ್ಯರೇ ಅಲ್ಲ. ತುಳಸೇಗೌಡ ಯಾವ ಸಂಘಟನೆಯಲ್ಲೂ ಇಲ್ಲದ ವ್ಯಕ್ತಿ, ದಯಾಕರ ರೈತ ಸಂಘ ಗ್ರೀನ್ ಬ್ರಿಗೇಡ್ ಅಧ್ಯಕ್ಷ ಎಂದು ಹೇಳಿಕೊಂಡು ಸ್ವ-ಹಿತಾಸಕ್ತಿಗೋಸ್ಕರ ಹಸಿರು ಶಾಲು ಹಾಕಿಕೊಂಡು ಓಡಾಡುವ ವ್ಯಕ್ತಿಗಳಾಗಿದ್ದಾರೆಂದು ಆರೋಪಿಸಿದರು.
ಸೈದ್ಧಾಂತಿಕ ಮತ್ತು ಜಾತ್ಯಾತೀತ ವಿಚಾರಗಳಿಗೆ ಬದ್ಧರಾಗಿ ರೈತಪರ ಚಳುವಳಿಗಳಲ್ಲಿ ತೊಡಗಿಸಿಕೊಂಡು ಲಾಟಿಏಟು, ಜೈಲು ಶಿಕ್ಷೆ ಅನುಭವಿಸಿರುವ ಅನೇಕ ಕಾರ್ಯಕರ್ತರು ನಮ್ಮಲ್ಲಿದ್ದಾರೆ. ಇಂತಹ ಯಾವುದೇ ಹಿನ್ನೆಲೆ ಇರದ ಈ ಇಬ್ಬರು ವ್ಯಕ್ತಿಗಳು ಕರ್ನಾಟಕ ರಾಜ್ಯ ರೈತ ಸಂಘದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಬರುತ್ತಿದ್ದಾರೆ. ಸುನಿಲ್ಕುಮಾರ್ ತಾಲೂಕು ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲು ಇವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.
ಇತೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಸಮಿತಿಗೆ ಸ್ವಾಮೀಜಿಯೊಬ್ಬರನ್ನು ಸದಸ್ಯರನ್ನಾಗಿ ಮಾಡಿ ಅವರನ್ನು ತಾಲೂಕು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದನ್ನು ರೈತ ಸಂಘ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸ್ವಾಮೀಜಿಯಿಂದ ಸಲಹೆ ಪಡೆಯುವಷ್ಟು ರೈತ ಸಂಘ ದುರ್ಬಲವಾಗಿಲ್ಲ, ದಿವಾಳಿಯೂ ಆಗಿಲ್ಲ. ಇಂತಹ ಕುಚೋದ್ಯಗಳು ಮತ್ತೆ ಮುಂದುವರಿದರೆ ರೈತ ಸಂಘದ ಕಾರ್ಯಕರ್ತರೇ ಇಂತಹವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ್, ರಾಜು, ಸಿದ್ದೇಗೌಡ, ವಿಜಯಕುಮಾರ್ ಮತ್ತಿತರರಿದ್ದರು.
No interference in the internal affairs of the farmers’ association will be tolerated.
Leave a comment