ಚಿಕ್ಕಮಗಳೂರು: ಅನಂತಕಾಲ ಮಾದರಿಯಾಗಿ ನಿಲ್ಲಬಲ್ಲ ಮಾನವೀಯ ಮೌಲ್ಯಗಳ ನಡುವೆ ಇಂದಿನ ವಿದ್ಯಾರ್ಥಿ ಯುವಜನರನ್ನು ನಿಲ್ಲಿಸಬೇಕಾಗಿರುವ ಬಹು ಮುಖ್ಯ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳನ್ನು ಕೇವಲ ಅಂಕಗಳ ಹಿಂದೆ ಓಡಿಸದೆ ಮಾನವೀಯ ಮೌಲ್ಯಗಳತ್ತ ಮುಖ ಮಾಡುವಂತೆ ಚಿಂತನೆಗೆ ಹಚ್ಚುವುದು ಈ ವರ್ತಮಾನದ ತುರ್ತಾಗಿದೆ ಎಂದು ಬರಹಗಾರ ಡಿ ಎಂ ಮಂಜುನಾಥಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಸಮೀಪ ಇರುವ ನರಗನಹಳ್ಳಿ ಕಿರಿಯ ಪ್ರಾರ್ಥಮಿಕ ಪಾಠಶಾಲಾ ಆವರಣದಲ್ಲಿ ಚಿಕ್ಕಮಗಳೂರಿನ ಐ ಡಿ ಎಸ್ ಜಿ ಸರ್ಕಾರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾನವೀಯ ಮೌಲ್ಯಗಳನ್ನು ಕುರಿತು ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಕೊಳ್ಳಬೇಕಾದ ಹಲವು ಸಂಗತಿಗಳನ್ನು ಕುರಿತು ಮಾನವೀಯ ಬದುಕಿನ ಮೇಲೆ ಬೆಳಕು ಚೆಲ್ಲಿ ಮಾತನಾಡಿದರು.
ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗುವುದಕ್ಕೆ ಹುಟ್ಟಿದ್ದೇವೆ, ಮನುಷ್ಯರಾಗುವುದು ಎಂದರೆ ಅದೊಂದು ಸುದೀರ್ಘವಾದ ಪ್ರಕ್ರಿಯೆ ಮತ್ತು ಸಾಧನೆ, ಭಾರತಂಥಹ ದೇಶದಲ್ಲಿ ವಿದ್ಯಾರ್ಥಿ ಯುವಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ, ಇವರೆಲ್ಲರೂ ಭವಿಷ್ಯದ ಭಾರತವನ್ನು ಸದೃಢವಾಗಿ ಕಟ್ಟಬೇಕಾಗಿದೆ, ಸದೃಢ ಸಮಾಜ ನಿರ್ಮಾಣ ಮಾಡಬೇಕಾದರೆ ಈ ನೆಲದ ಮಣ್ಣಿನ ಮಹತ್ವವನ್ನು ಅರಿಯಬೇಕು, ಭಾರತ ಎಂದರೆ ಏಕವಚನವಲ್ಲ, ಅದು ಬಹುತ್ವದಿಂದ ಕೂಡಿದ ಬಹುವಚನವಾಗಿದೆ, ಈ ನೆಲದ ಅಂತಿಮ ಸತ್ಯ ಮಣ್ಣೆ ಆಗಿದೆ, ಚಕ್ರವರ್ತಿ ಆಗಿರಲಿ ಅಥವಾ ಈ ನೆಲದ ಕಟ್ಟಕಡೆಯ ಸಾಮಾನ್ಯ ‘ಮನುಷ್ಯನೇ ಆಗಿರಲಿ, ಸತ್ತರೆ ಈ ಇಬ್ಬರು ಒಂದೇ ರೀತಿ ಮಣ್ಣಲ್ಲಿ ಮಣ್ಣಾಗುವರು, ಆತ ಚಕ್ರವರ್ತಿ ಈತ ಸಾಮಾನ್ಯರಲ್ಲಿ ಸಾಮಾನ್ಯನು ಎಂದು ಮಣ್ಣು ತರತಮವನ್ನು ಮಾಡದೆ ಇಬ್ಬರನ್ನು ಒಂದೇ ರೀತಿ ಮಣ್ಣಲ್ಲಿ ಮಣ್ಣಾಗಿಸುತ್ತದೆ, ಇದೇ ಬದುಕಿನ ಅಂತಿಮ ಸತ್ಯ ಎಂಬುದನ್ನು ವಿದ್ಯಾರ್ಥಿಗಳು ಮನಗಂಡು ಜಾತಿ ಮತ ಧರ್ಮಗಳನ್ನು ಮೀರಿ ಮನುಷ್ಯತ್ವದ ಹಾದಿಯಲ್ಲಿ ಸಾಗಬೇಕು ಎಂದು ಕರೆ ಕೊಟ್ಟರು.
ಐ ಡಿ ಎಸ್ ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಮಲ್ಪಶ್ರೀ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯ ಇಂತಹ ಶಿಬಿರಗಳು ಔಪಚಾರಿಕ ಶಿಕ್ಷಣದೊಟ್ಟಿಗೆ ಅನೌಪಚಾರಿಕ ಶಿಕ್ಷಣವನ್ನು ಕಲಿಸಿಕೊಡುತ್ತಾ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು ಸಂಯಮವನ್ನು ಕಲಿಸುತ್ತವೆ, ಕಲಿಕಾ ಸಮಯದಲ್ಲಿ ಮೈಮರೆಯದೆ ಮೈ ಎಲ್ಲವನ್ನು ಕಣ್ಣಾಗಿ ಮಾಡಿಕೊಂಡು ಈ ಶಿಬಿರದ ಸಾರ್ಥಕತೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕರಾದ ಗಿರೀಶ್ ಕುಮಾರ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾನವೀಯ ನೆಲಗಟ್ಟಿನಲ್ಲಿ ಜಾತಿ ಮತ ಪಂಥಗಳನ್ನು ಮೀರಿ ಸಮೃದ್ಧ ಬದುಕನ್ನು ಕಟ್ಟಿಕೊಳ್ಳಬೇಕಾದರೆ ನಾವು ಹಲವಷ್ಟನ್ನು ಮೀರಬೇಕಾಗಿದೆ, ಕೆಲವೊಂದಷ್ಟನ್ನು ಮುರಿದು ಕಟ್ಟಬೇಕಾಗಿದೆ, ಇಂತಹ ಪ್ರಕ್ರಿಯೆಗೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ಪೂರಕವಾಗಿದೆ ಎಂದರು.
ಸಮಾರಂಭದಲ್ಲಿ ಐ ಡಿ ಎಸ್ ಜಿ ಪದವಿ ಕಾಲೇಜಿನ ಎನ್ಎಸ್ಎಸ್ ೨ನೇ ಘಟಕದ ಸಂಯೋಜಕ ಕಾಂತರಾಜು, ಸಹ ಸಂಯೋಜಕ ಲಿಂಗರಾಜು,ವಾಣಿಜ್ಯಶಾಸ್ತ್ರ ಉಪನ್ಯಾಸಕಿ ನಿವೇದಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನ್ ಸ್ವಾಗತಿಸಿ, ಪೂಜಾ ವಂದಿಸಿ, ಟಿ ಎಸ್ ಚೇತನ್ ಕಾರ್ಯಕ್ರಮವನ್ನು ನಿರೂಪಿಸಿದರು.
It is necessary to encourage thinking towards human values.
Leave a comment