ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸರಕಾರ ಪರಿಶಿಷ್ಟ ಪಂಗಡದಲ್ಲಿಯೂ ಒಳಮೀಸಲು ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಂ ಸಿದ್ದಿ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜನಾಂಗಕ್ಕೆ ಒಳಮೀಸಲು ನೀಡುವ ಸಂಬಂಧ ೨೦೨೪ ಆಗಸ್ಟ್ ೧ ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅದರಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದರು.
ಪರಿಶಿಷ್ಟ ಜಾತಿಗೆ ಮಾತ್ರವಲ್ಲದೆ ಪರಿಶಿಷ್ಟ ಪಂಗಡಗಳಿಗೂ ಒಳಮೀಸಲು ನೀಡಲು ತೀರ್ಪು ನೀಡಿದೆ. ಆದರೆ, ರಾಜ್ಯ ಸರಕಾರ ಬರಿ ಪರಿಶಿಷ್ಟ ಜಾತಿಗಳತ್ತ ಮಾತ್ರ ಗಮನಹರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಪರಶಿಷ್ಟ ಪಂಗಡದಲ್ಲಿ ೫೦ ಜಾತಿಗಳಿವೆ. ೨೦೧೧ ರ ಜನಗಣತಿ ಪ್ರಕಾರ ಈ ೫೦ ಜಾತಿಗಳ ಒಟ್ಟು ಜನಸಂಖ್ಯೆ ೪೨.೪೮ ಲಕ್ಷ ಇದೆ. ಇದರಲ್ಲಿ ವಾಲ್ಮೀಕಿ ಸಮುದಾಯದ್ದೇ ೩೨.೯೬ ಲಕ್ಷ ಜನಸಂಖ್ಯೆ ಇದ್ದರೆ, ಉಳಿದ ೪೯ ಜಾತಿಗಳದ್ದು ಕೇವಲ ೯.೫೨ ಲಕ್ಷ. ಹೀಗಾಗಿ ಸರಕಾರ ಈಗ ನೀಡುತ್ತಿರುವ ಹೆಚ್ಚಿನ ಮೀಸಲು ಪ್ರಬಲ ಪಂಗಡದ ಪಾಲಾಗುತ್ತಿದೆ ಎಂದು ವಿವರಿಸಿದರು.
ಎಷ್ಟೋ ಆದಿವಾಸಿ ಜಾತಿಗಳಲ್ಲಿ ಸರಕಾರಿ ನೌಕರಿ ಎಂಬುದು ಗಗನಕುಸುಮವಾಗಿದೆ. ಕೆಲವು ಜಾತಿಗಳಿಗೆ ಸಂಖ್ಯಾಬಲ ಇದ್ದರೂ ಅವರ ಸಂಖ್ಯೆ ೫೦ ಸಾವಿರದ ಆಸುಪಾಸಿನಲ್ಲಿದೆ. ಹೀಗಿರುವಾಗ ಪರಿಶಿಷ್ಟ ಪಂಗಡದೊಳಗೆ ಪ್ರಬಲ ಎನಿಸುವ ವಾಲ್ಮೀಕಿ ಸಮುದಾಯವೇ ಉಳಿದ ತಬ್ಬಲಿ ಜಾತಿಗಳನ್ನು ತಾಯ್ತನದಿಂದ ಪೊರೆಯಬೇಕಿದೆ. ಪರಿಶಿಷ್ಟ ಪಂಗಡಗಳ ನಡುವೆ ಒಳಮೀಸಲು ಹಂಚಿಕೆಯು ಸಾಧ್ಯವಾದರೆ ಸಣ್ಣ, ಅತಿಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪರಿಶಿಷ್ಟ ಪಂಗಡದಲ್ಲೂ ಒಳಮೀಸಲು ಜಾರಿಗೆ ತರಬೇಕು. ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಸ್ಪಷ್ಟಪಡಿಸಿದರು.
ಸಮುದಾಯದ ಮುಖಂಡ ಪ್ರೊ. ಜಡೇಗೌಡ ಮಾತನಾಡಿ, ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವರ್ಗೀಕರಣ ಮಾಡುವಾಗ ನಿಖರ ದತ್ತಾಂಶಗಳ ಸಂಗ್ರಹ, ಹಿಂದುಳಿದಿರುವಿಕೆಯ ಅಧ್ಯಯನ, ಸಮಾನರು ಮತ್ತು ಅಸಮಾನರು ಒಂದೇ ಗುಂಪಿನಲ್ಲಿ ಇರದಂತೆ ಎಚ್ಚರವಹಿಸುವುದು ಈ ಮೂರು ಅಂಶಗಳನ್ನು ಉಲ್ಲೇಖಿಸಿದೆ. ಇದರ ಆಧಾರದಲ್ಲಿ ಅಧ್ಯಯನ ನಡೆಸಿ ವರ್ಗೀಕರಣದ ಸೂತ್ರಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರಕಾರ ಪ್ರತ್ಯೇಕ ಆಯೋಗವನ್ನು ರಚಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆದಿವಾಸಿ ಪರಿಷತ್ತಿನ ಮುಖಂಡರಾದ ಮುತ್ತಪ್ಪ, ಮಹೇಶ್ನಾಯಕ, ಮಿಟ್ಟುರಂಜಿತ್, ಜಯರಾಂ, ಮಡೆನೇರಲು ಶಂಕರ್, ಪಿ. ರಾಜೇಶ್ ಇದ್ದರು.
Internal reservation should be implemented in Scheduled Tribes as well.
Leave a comment