ಚಿಕ್ಕಮಗಳೂರು: ವಿರೋಧ ಪಕ್ಷಗಳು ವೈಯಕ್ತಿಕ ಟೀಕೆ ಮಾಡದೆ ರಾಜಕೀಯವಾಗಿ ಆರೋಗ್ಯಕರ ಸಲಹೆ ಸೂಚನೆಗಳ ಮೂಲಕ ಎಚ್ಚರಿಸುವ ಕೆಲಸ ಮಾಡಿದಾಗ ಮಾತ್ರ ಆಡಳಿತ ಪಕ್ಷ ಮೈಮರೆಯದೆ ಅಭಿವೃದ್ಧಿಪರ ಕೆಲಸ ಮಾಡುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಅವರು ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಸುಮಾರು ೬.೧೭ ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಸೈಕಲ್ ತುಳಿ ಸಮಸ್ಯೆ ತಿಳಿ ಎಂಬ ಘೋಷಣೆಯೊಂದಿಗೆ ನಗರದಲ್ಲಿ ಸೈಕಲ್ ಸಂಚಾರ ಮಾಡುವ ಮೂಲಕ ನಾಗರಿಕರ ನಿಬ್ಬೆರಗಾಗುವಂತೆ ಮಾಡಿದರು.
ಎಲ್ಲಾ ಸಾರ್ವಜನಿಕರ ತೆರಿಗೆ ಹಣವಾದ ಸರ್ಕಾರ ಅನುದಾನದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಶಾಶ್ವತ ಗುಣಮಟ್ಟದ ಕಾಮಗಾರಿ ನಡೆಸಬೇಕೆಂಬ ನಿಟ್ಟಿನಲ್ಲಿ ಇಂಜಿನಿಯರ್ಗಳು ಸ್ಥಳದಲ್ಲಿಯೇ ನಿಂತು ಗುತ್ತಿಗೆದಾರರೊಂದಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸಬೇಕೆಂದು ಸೂಚನೆ ನೀಡಿದರು.
ನಗರದ ಎಲ್ಲಾ ರಸ್ತೆಗಳು ಅಮೃತ್ ಯೋಜನೆ ಮತ್ತು ಯುಜಿಡಿ ಕಾಮಗಾರಿಯಿಂದ ಗುಂಡಿ ಬಿದ್ದಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು ತಾಲ್ಲೂಕು ಕಚೇರಿ ಆವರಣದಲ್ಲಿರುವ ಸಂಕಷ್ಟಹರ ಗಣಪತಿ ದೇವಸ್ಥಾನದ ಮುಂಭಾಗ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
೨೨.೫೦ ಕೋಟಿ ರೂ ವೆಚ್ಚದಲ್ಲಿ ನಗರದಲ್ಲಿ ಹೆಚ್ಚು ಸಂಚರಿಸುವ ಪ್ರಮುಖ ರಸ್ತೆಗಳನ್ನು ಮೊದಲು ಅಭಿವೃದ್ಧಿಪಡಿಸಬೇಕೆಂದು ನಗರಸಭೆ ಅಧಿಕಾರಿಗಳಿಗೆ ಹಾಗೂ ಲೋಕೋಪಯೋಗಿ ಇಲಾಖೆಯ ಎಇಇ ಗೆ ಸೂಚನೆ ನೀಡಿದ್ದೇವೆ ಎಂದರು.
ಪಿಡಬ್ಲೂಡಿ ಯಿಂದ ೧ ಕೋಟಿ ರೂ ವೆಚ್ಚದಲ್ಲಿ ೧ ಕಿ.ಮೀ ವರೆಗೆ ಪ್ರಮುಖ ರಸ್ತೆಯನ್ನು ಮರು ಡಾಂಬರೀಕರಣ ಮಾಡಲಾಗುತ್ತಿದೆ. ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಅರಳೀಮರ ಸಮೀಪದಿಂದ ಫುಡ್ ಪ್ಯಾಲೇಸ್ವರೆಗೆ ಮತ್ತು ಒಕ್ಕಲಿಗರ ಸಮುದಾಯ ಭವನದವರೆಗೆ ೨೨.೫೦ ಕೋಟಿ ರೂ ವೆಚ್ಚದಲ್ಲಿ ರಸ್ತೆಗೆ ಡಾಂಬರೀಕರಣ ಮಾಡುವುದಾಗಿ ಹೇಳಿದರು.
೫೦ ಲಕ್ಷ ರೂ ವೆಚ್ಚದಲ್ಲಿ ವಾರ್ಡ್ ನಂ.೩೩ ರ ಕಾಲಭೈರವೇಶ್ವರ ದೇವಸ್ಥಾನದಿಂದ ಗಿರಿ ರಸ್ತೆವರೆಗೆ, ಶಾದಿಮಹಲ್ನಿಂದ ಛಾನಲ್ವರೆಗೆ ಡಾಂಬರೀಕರಣ ಮಾಡಲಾಗುವುದು ಎಂದ ಅವರು, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಡೆಗೆ ಹೆಜ್ಜೆ ಇಟ್ಟಿದ್ದು, ೨೦ ಕೋಟಿ ರೂ ವೆಚ್ಚದಲ್ಲಿ ೧.೫೦ ಎಕರೆ ಪ್ರದೇಶದಲ್ಲಿ ನೂತನ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇನ್ನು ೧೪ ತಿಂಗಳಲ್ಲಿ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದರು.
ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೆ ಕ್ಷೇತ್ರದ ಮತ್ತು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ಸಾಕ್ಷಿ ಗುಡ್ಡೆಗಳನ್ನು ಉಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು, ಬಡವರ ಪರ ಕೆಲಸ ಮಾಡಿ ಪ್ರೀತಿ ಗಳಿಸುತ್ತೇವೆ. ಮತದಾರರ ಗೌರವಕ್ಕೆ ಧಕ್ಕೆ ತರದಂತೆ ಸ್ಥಳೀಯ ಜನಪ್ರತಿನಿಧಿಗಳು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಹೆಚ್.ಡಿ. ತಮ್ಮಯ್ಯನವರೊಂದಿಗೆ ಕೈಜೋಡಿಸಿ ನಾಗರಿಕರಿಗೆ ಅನುಕೂಲ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾನಾಯ್ಕ್, ಸದಸ್ಯರುಗಳಾದ ಎ.ಸಿ. ಕುಮಾರಗೌಡ, ಸಿ.ಪಿ ಲಕ್ಷ್ಮಣ, ಪರಮೇಶ್ ರಾಜ್ ಅರಸ್ ರಾಜು, ಅರುಣ್ ಕುಮಾರ್, ಮಂಜುಳ ಲಕ್ಷ್ಮಣ್, ಲಕ್ಷ್ಮಣ, ಭವ್ಯ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ದೇವ್, ರಮೇಶ್, ಪಿಡಬ್ಲೂಡಿ ಎಇಇ ಮಲ್ಲಿಕಾರ್ಜುನ್, ಮೆಸ್ಕಾಂ ಎಇಇ ಮಂಜುನಾಥ್ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಮೊದಲಿಗೆ ಮಾಜಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸ್ವಾಗತಿಸಿದರು.
Gudali Puja for road development work at a cost of Rs 6.17 crore
Leave a comment