ಚಿಕ್ಕಮಗಳೂರು: ಕಾಫಿನಾಡಿನ ರಕ್ಷಕರಿಗೇ ಈಗ ಸೈಬರ್ ಕಳ್ಳರ ಕಾಟ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಸಿ) ಜಿತೇಂದ್ರ ಕುಮಾರ್ ದಯ್ಯಾ ಅವರ ಹೆಸರಿನಲ್ಲೇ ಕಿಡಿಗೇಡಿಗಳು ನಕಲಿ ಫೇಸ್ಬುಕ್ ಖಾತೆಯನ್ನು ಸೃಷ್ಟಿಸಿದ್ದಾರೆ.
ಜಿತೇಂದ್ರ ಕುಮಾರ್ ದಯ್ಯಾ ಅವರು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ನಕಲಿ ಖಾತೆ ಸಕ್ರಿಯಗೊಂಡಿರುವುದು ಅಚ್ಚರಿ ಮೂಡಿಸಿದೆ. “ಐ.ಪಿ.ಎಸ್ ಜಿತೇಂದ್ರ ಕುಮಾರ್ ದಯ್ಯಾ” ಎಂಬ ಹೆಸರಿನಲ್ಲಿ ಖಾತೆ ತೆರೆದಿರುವ ಕಿಡಿಗೇಡಿ, ಇದು ಅಸಲಿ ಖಾತೆಯೆಂದೇ ಬಿಂಬಿಸಲು ಸಕಲ ತಯಾರಿ ನಡೆಸಿದ್ದಾನೆ.
ಇದರಲ್ಲಿ ಚಿಕ್ಕಮಗಳೂರು ಪೊಲೀಸ್ ಇಲಾಖೆಯ ಅಧಿಕೃತ ಚಟುವಟಿಕೆಗಳು ಹಾಗೂ ಪ್ರಮುಖ ಮಾಹಿತಿಗಳನ್ನೇ ನಿರಂತರವಾಗಿ ಪೋಸ್ಟ್ ಮಾಡುವ ಮೂಲಕ ಸಾರ್ವಜನಿಕರನ್ನು ವಂಚಿಸುವ ಮತ್ತು ನಂಬಿಸುವ ವ್ಯವಸ್ಥಿತ ಸಂಚು ರೂಪಿಸಲಾಗಿದೆ.
ಅಧಿಕಾರಿಯೊಬ್ಬರ ಹೆಸರನ್ನು ಬಳಸಿಕೊಂಡು ಇಲಾಖೆಯ ಒಳಗಿನ ಮಾಹಿತಿಯಂತೆ ಪೋಸ್ಟ್ ಮಾಡುತ್ತಿರುವುದು ಇಲಾಖೆಯ ಘನತೆಗೆ ಧಕ್ಕೆ ತರುವ ಆತಂಕವನ್ನು ಸೃಷ್ಟಿಸಿದೆ. ನಕಲಿ ಖಾತೆ ಸೃಷ್ಟಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆ.
ಸಾರ್ವಜನಿಕರು ಇಂತಹ ನಕಲಿ ಖಾತೆಗಳ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಬೇಡಿಕೆಗಳಿಗೆ ಸ್ಪಂದಿಸಬಾರದಾಗಿದೆ.
Fake Facebook account in the name of SC Jitendra Kumar Dayya
Leave a comment