ಬೆಂಗಳೂರು: ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ವಿಕಾಸಸೌಧದಲ್ಲಿಂದು ಚಿಕ್ಕಮಗಳೂರು ಜಿಲ್ಲೆ ಖಾಂಡ್ಯ ಹೋಬಳಿಯ ಗ್ರಾಮಸ್ಥರ ನಿಯೋಗವು ಕಾಡಾನೆ ಸೆರೆ, ಕಾಡುಕೋಣ ಮತ್ತು ಕಾಡುಹಂದಿಗಳ ಉಪಟಳ ನಿಯಂತ್ರಿಸುವಂತೆ ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, 2011ರಲ್ಲಿ ಹಳ್ಳಿಗಳನ್ನೂ ಬಫರ್ ವಲಯದಲ್ಲಿ ಸೇರಿಸಲಾಗಿದೆ. ಅದೇ ರೀತಿ ಹಿಂದಿನ ಬಿಜೆಪಿ ಸರ್ಕಾರ ಡೀಮ್ಡ್ ಅರಣ್ಯ ವಿಚಾರದಲ್ಲೂ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸದೆ, ಸಲ್ಲಿಸಿರುವ ಪ್ರಮಾಣ ಪತ್ರದಿಂದ ಗೊಂದಲವಾಗಿದ್ದು, ಈಗ ಆ ಸಮಸ್ಯೆಯನ್ನೂ ಪರಿಹರಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
2022ರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೆ ಕುಳಿತಲ್ಲೇ ಮನೆ, ಪಟ್ಟಾ ಜಮೀನು, ಸರ್ಕಾರಿ ಕಚೇರಿ, ಶಾಲೆ, ಆಸ್ಪತ್ರೆ ಎಲ್ಲವನ್ನೂ ಡೀಮ್ಡ್ ಅರಣ್ಯದ ವ್ಯಾಪ್ತಿಗೆ ಸೇರಿಸಿದ್ದಾರೆ. ಈಗ ಎಲ್ಲೆಲ್ಲಿ ಇಂತಹ ಸಮಸ್ಯೆ ಇದೆಯೋ ಅದಕ್ಕೆ ಪರ್ಯಾಯವಾಗಿ ಬೇರೆ ಭೂಮಿ ಗುರುತಿಸಿ, ಡೀಮ್ಡ್ 2ರಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಅರಣ್ಯ ಪ್ರದೇಶದ ಪ್ರಮಾಣ ಉಳಿಸಿಕೊಂಡು ಸುಪ್ರೀಂಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದರು.
*ಆನೆ ಹಾವಳಿಗೆ ಶಾಶ್ವತ ಪರಿಹಾರ: ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ ಹಿಡಿಯಲಾಗಿದೆ. ಇನ್ನೂ ಎರಡು ಆನೆಗಳನ್ನು ಸೆರೆ ಹಿಡಿಯಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಕೆಲವು ಭಾಗದಲ್ಲಿ ಕಾಡಿನ ಹೊರಗೆ 100ಕ್ಕೂ ಹೆಚ್ಚು ಆನೆಗಳಿದ್ದು, ಅವುಗಳಿಗೆ ಕಾಫಿ ತೋಟ ಯಾವುದು, ಅರಣ್ಯ ಯಾವುದು ಎಂದು ತಿಳಿಯುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಆನೆಧಾಮ ನಿರ್ಮಿಸಲು 53 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ, ಆನೆ ಕಂದಕ ನಿರ್ವಹಣೆ, ಟೆಂಟಕಲ್ ಫೆನ್ಸಿಂಗ್, ಸೌರ ತಂತಿ ಬೇಲಿ ಅಳವಡಿಕೆ ಮಾಡಲಾಗಿದೆ, ಸಮಗ್ರ ಕಮಾಂಡ್ ಸೆಂಟರ್ ಮಾಡಿ ಸಾರ್ವಜನಿಕರಿಗೆ ವನ್ಯಜೀವಿ ಸಂಚಾರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 12 ಕೋಟಿ ರೂ.ವೆಚ್ಚದಲ್ಲಿ ನಿಮ್ಮ ಭಾಗದಲ್ಲಿ ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಕಾಡುಕೋಣ, ಕಾಡೆಮ್ಮೆ ನಿಯಂತ್ರಣಕ್ಕೆ ಇಲಾಖೆಯ ಸಿಬ್ಬಂದಿ ತರಬೇತಿ ಪಡೆದು ಬಂದಿದ್ದು, ಕಾಡುಪ್ರಾಣಿಗಳಿಗಾಗಲೀ, ಕಾಡಿನಂಚಿನ ಗ್ರಾಮಸ್ಥರಿಗಾಗಲೀ ತೊಂದರೆ ಆಗದಂತೆ ಹಾಗೂ ಜೀವ, ಜೀವನೋಪಾಯ ಎರಡನ್ನೂ ಉಳಿಸಲು ಪ್ರಕೃತಿ ಪರಿಸರ ರಕ್ಷಣೆಯೊಂದಿಗೆ ಸುಸ್ಥಿರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.
ಕಾಡಿನಂಚಿನ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸುವ ಮೂಲಕ ಗ್ರಾಮಗಳ ಮೂಲಸೌಲಭ್ಯ ಮತ್ತು ಗ್ರಾಮೀಣ ಜನರ ಕೌಶಲ್ಯವರ್ಧನೆಯಂತಹ ಕಾರ್ಯಕ್ರಮಗಳನ್ನೂ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶೃಂಗೇರಿ ಶಾಸಕ ರಾಜೇಗೌಡ, ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಅಂಶುಮಂತಗೌಡ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
Steps taken to identify Bhadra Sanctuary as an eco-sensitive area
Leave a comment