ಕಳಸ: ನಿರಂತರ ಮಳೆಯಿಂದಾಗಿ ರಸ್ತೆ ತೇವಾಂಶದಿಂದ ಕೂಡಿದ್ದ ಪರಿಣಾಮ, ಬೈಕ್ಗೆ ಸೈಡ್ ಕೊಡಲು ಹೋಗಿ ಕಾರೊಂದು ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಉರುಳಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬೈನೇಕಾಡು ಹೋಂ ಸ್ಟೇ ಬಳಿ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರುದ್ದಾರೆ.
ಹೊರನಾಡಿನಿಂದ ಉಡುಪಿಯ ಕಡೆಗೆ ಪ್ರಯಾಣಿಸುತ್ತಿದ್ದ ವ್ಯಾಗನರ್ ಕಾರು ಬೈನೇಕಾಡು ಹೋಂ ಸ್ಟೇ ಬಳಿ ತಲುಪಿದಾಗ ಎದುರಿನಿಂದ ಬಂದ ಬೈಕ್ಗೆ ಜಾಗ ಬಿಟ್ಟುಕೊಡಲು ಮುಂದಾಗಿದೆ. ಈ ವೇಳೆ ಮಳೆಯಿಂದಾಗಿ ರಸ್ತೆಯು ತೀವ್ರ ತೇವಾಂಶದಿಂದ ಕೂಡಿದ್ದರಿಂದ ಕಾರು ದಿಢೀರನೆ ಸ್ಕಿಡ್ ಆಗಿದೆ. ಚಾಲಕನ ನಿಯಂತ್ರಣಕ್ಕೆ ಸಿಗದ ಕಾರು ರಸ್ತೆ ಪಕ್ಕದ ಕಾಫಿ ತೋಟಕ್ಕೆ ನುಗ್ಗಿ ಉರುಳಿ ಬಿದ್ದಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಕಾರಿನಲ್ಲಿದ್ದ ಐವರನ್ನು ಅತ್ಯಂತ ಜಾಗರೂಕತೆಯಿಂದ ಹೊರತೆಗೆದು ರಕ್ಷಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸದೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಸದ್ಯ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ರಸ್ತೆಗಳು ಸದಾ ತೇವ ಮತ್ತು ಜಾರಿಕೆಯಿಂದ ಕೂಡಿರುತ್ತವೆ. ಆದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಹಾಗೂ ನಿಧಾನವಾಗಿ ವಾಹನಗಳನ್ನು ಚಲಾಯಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
Car loses control and rolls into coffee plantation
Leave a comment