ಮೂಡಿಗೆರೆ: ಕೆಸದ ಸೊಪ್ಪು ತರಲು ಹೋದ ವೃದ್ಧೆಯೊಬ್ಬರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.
ಕಡಿದಾಳು ಗ್ರಾಮದ ನಿವಾಸಿ ಸುಬ್ಬಮ್ಮ (65) ಮೃತಪಟ್ಟ ದುರ್ದೈವಿ. ಕೆಸದ ಸೊಪ್ಪು ತರುವುದಾಗಿ ಮನೆಯಲ್ಲಿ ಹೇಳಿ ಹೊರಹೋಗಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತಲಿನ ಭಾಗಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಕೊನೆಗೆ ಹೇಮಾವತಿ ನದಿಯಲ್ಲಿ ಸುಬ್ಬಮ್ಮ ಅವರ ಶವ ಪತ್ತೆಯಾಗಿದೆ. ನದಿ ದಂಡೆಯಲ್ಲಿ ಕೆಸದ ಸೊಪ್ಪು ಕೊಯ್ಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜ ಸೇವಕ ಅರೀಫ್ ಬಣಕಲ್ ಮತ್ತು ಅವರ ತಂಡದ ಸಹಕಾರದೊಂದಿಗೆ ನದಿಯಿಂದ ಶವವನ್ನು ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಎಂ.ಜಿ.ಎಂ ಆಸ್ಪತ್ರೆಗೆ ರವಾನಿಸಲಾಗಿದೆ.
Elderly woman dies after going to fetch dirty greens
Leave a comment