ಚಿಕ್ಕಮಗಳೂರು: ವೈದ್ಯಕೀಯ ಕಾಲೇಜು ಮೂಲಸೌಕರ್ಯ ಪರಿಶೀಲನೆ ವೇಳೆ ಸವಿತಾ ಸಮಾಜಕ್ಕೆ ಅವಮಾನ ಮಾಡುವ ಪದವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಳಸಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಸವಿತಾ ಸಮಾಜ ಆಗ್ರಹಿಸಿದೆ.
‘ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ, ಬಿಜೆಪಿಯ ರಾಜ್ಯ, ರಾಷ್ಟ್ರ ಮಟ್ಟದ ಹುದ್ದೆಗಳ ಜವಾಬ್ದಾರಿಗಳನ್ನು ಸಿ.ಟಿ.ರವಿ ಅವರು ನಿರ್ವಹಿಸಿದ್ದಾರೆ. ಎಲ್ಲಾ ವಿಷಯಗಳ ಅರಿವು ಹೊಂದಿರುವ ಅವರೇ ಈ ರೀತಿ ಮಾತನಾಡಿದರೆ ತಿಳಿವಳಿಕೆ ಇಲ್ಲದವರ ಪಾಡೇನು’ ಎಂದು ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಸಂಕಲ್ಪ ಪ್ರಶ್ನಿಸಿದ್ದಾರೆ.
‘ಸಿ.ಟಿ.ರವಿ ಅವರು ಸಮಾಜದೊಂದಿಗೆ ಸಲುಗೆ ಹೊಂದಿದ್ದಾರೆ. ಅವರೇ ಈ ರೀತಿಯ ಪದ ಬಳಸಿರುವುದರಿಂದ ಸಮಾಜಕ್ಕೆ ನೋವಾಗಿದೆ. ಅಚಾತುರ್ಯ ಅರಿತು ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು. ಇನ್ನಾದರೂ ನಿಷೇಧಿತ ಪದ ಬಳಸದಂತೆ ಕಠಿಣ ಕಾನೂನು ತರುವಂತೆ ಸದನದಲ್ಲಿ ಅವರೇ ಮಾತನಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ದಶಕಗಳ ಹೋರಾಟದ ಫಲವಾಗಿ ಸರ್ಕಾರವು ಅವಮಾನಿತ ಪದ ಬಳಕೆ ನಿಷೇಧ ಮಾಡಿ ಮೂಗಿಗೆ ತುಪ್ಪ ಸವರಿದೆ. ಈ ಪದ ಬಳಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ನ್ಯಾಯಾಲಯಕ್ಕೆ ಹೋಗಿ ಕನಿಷ್ಠ ₹100 ದಂಡ ಕಟ್ಟುವ ಕಾನೂನು ತರಬೇಕಿದೆ. ಈ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ಗಮನ ಹರಿಸಿಲ್ಲ. ಸಿ.ಟಿ.ರವಿ ಅವರು ಅಧಿವೇಶನ ದಲ್ಲಿ ವಿಷಯ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
District Savita Samaj demands pardon for C.T. Ravi
Leave a comment