ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿಬಟ್ಟಲು ಕಾಲೋನಿಯಲ್ಲಿ ನಡೆದಿದೆ.
ಕೃಷ್ಣಾನಾಯ್ಕ ಅಲಿಯಾಸ್ ಸಂತೋಷ್ ಕೊಲೆಯಾದ ದುರ್ದೈವಿಯಾಗಿದ್ದು, ಆತನ ಸ್ವಂತ ತಮ್ಮ ಯುವರಾಜ ನಾಯ್ಕ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ನಂದಿಬಟ್ಟಲು ಕಾಲೋನಿಯಲ್ಲಿ ತಮ್ಮ, ಅಣ್ಣ ಹಾಗೂ ತಂಗಿಯ ಮಕ್ಕಳೊಂದಿಗೆ ವಾಸವಿದ್ದ ಯುವರಾಜ ಈ ಹಿಂದೆಯೂ ಮನೆಯಲ್ಲಿ ತಾಯಿ ಹಾಗೂ ಅಣ್ಣನೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದನು.
ಭಾನುವಾರ ರಾತ್ರಿ ಎಸ್ಟೇಟ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ, ತಂಗಿ ಮಮತಾಳ ಪುತ್ರಿಗೆ ಸಂತೋಷ್ ಊಟ ಮಾಡಿಸುತ್ತಿದ್ದಾಗ ಆಕೆ ನಿದ್ದೆಗಣ್ಣಿನಲ್ಲಿ ಬಿದ್ದು ಮುಖ ಊದಿಕೊಂಡಿತ್ತು. ಬಳಿಕ ಮನೆಗೆ ಬಂದ ಯುವರಾಜ, ಮಗುವಿನ ಕೆನ್ನೆ ಊದಿಕೊಂಡಿರುವುದನ್ನು ಕಂಡು, ಸಂತೋಷನೇ ಮಗುವಿಗೆ ಹೊಡೆದಿದ್ದಾನೆ ಎಂದು ತಪ್ಪಾಗಿ ತಿಳಿದು ರೊಚ್ಚಿಗೆದ್ದಿದ್ದಾನೆ. ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ, ಅಣ್ಣ ಸಂತೋಷನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ.
ಕೈಗಳಿಂದ ಕಪಾಳ ಮತ್ತು ಬೆನ್ನಿಗೆ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ, ಕಬ್ಬಿಣದ ಪೈಪ್ನಿಂದ ಮುಖ ಮತ್ತು ತಲೆಗೆ ಬಲವಾಗಿ ಹೊಡೆದು ರಕ್ತದ ಮಡುವಿನಲ್ಲಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಶಿವಮೊಗ್ಗ ತಾಲೂಕಿನ ಮಂಡನಕೊಪ್ಪದಲ್ಲಿ ವಾಸವಿದ್ದ ತನ್ನ ಅಕ್ಕ ಲಕ್ಷ್ಮಿಬಾಯಿಗೆ ಸ್ವತಃ ಫೋನ್ ಮಾಡಿ, ಅಣ್ಣನನ್ನು ಹೊಡೆದು ಸಾಯಿಸಿದ್ದೇನೆ ಎಂದು ತಿಳಿಸಿದ್ದಾನೆ. ಇದರಿಂದ ಗಾಬರಿಗೊಂಡ ಲಕ್ಷ್ಮಿಬಾಯಿ, ನೆರೆಹೊರೆಯವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದು ನೋಡಿದಾಗ ಮನೆಯ ಬಾಗಿಲ ಮುಂಭಾಗದಲ್ಲೇ ಸಂತೋಷ್ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ.
ಮೃತ ಸಂತೋಷನ ಸಹೋದರಿ ಲಕ್ಷ್ಮಿಬಾಯಿ ನೀಡಿದ ಲಿಖಿತ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸರು ಆರೋಪಿ ಯುವರಾಜನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
A fight between siblings ended in murder
Leave a comment