ಮೂಡಿಗೆರೆ: ಕೂಲಿ ಹಣದ ವಿಚಾರವಾಗಿ ಕಾಫಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದಾಗ, ತೋಟದ ಮಾಲೀಕ ಹಾರಿಸಿದ ಗುಂಡು 4 ವರ್ಷದ ಬಾಲಕನ ತಲೆಗೆ ತಾಗಿದ ಘಟನೆ ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬಾಳೆಹಳ್ಳಿ ಗ್ರಾಮದ ಜಗದೀಶ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ಕಾರ್ಮಿಕರು ದಿನಕ್ಕೆ ₹400 ಕೂಲಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ತೋಟದ ಮಾಲೀಕ, ‘ಸದ್ಯಕ್ಕೆ ₹350ರಂತೆ ಕೂಲಿ ಕೊಡುತ್ತೇನೆ. ಬಾಕಿ ₹50 ಅನ್ನು ನಂತರ ಕೊಡುತ್ತೇನೆ’ ಎಂದು ತಿಳಿಸಿದ್ದರು.
ಇದಕ್ಕೆ ಒಪ್ಪದ ಕಾರ್ಮಿಕರು, ಪೂರ್ಣ ಕೂಲಿ ಈಗಲೇ ನೀಡಬೇಕೆಂದು ಪಟ್ಟುಹಿಡಿದರು. ಜೊತೆಗೆ ಅಕ್ಕಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರನ್ನೆಲ್ಲ ಕರೆಸಿಕೊಂಡು ಮಾಲೀಕರ ಜೊತೆ ವಾಗ್ವಾದಕ್ಕೆ ಇಳಿದರು.
ಮಾತಿನ ಚಕಮಕಿ ಕೈಮೀರಿದಾಗ ಮಾಲೀಕ ಜಗದೀಶ್ ಕಾರ್ಮಿಕರನ್ನು ಹೆದರಿಸಲು ತೋಟಕೋವಿ ತಂದು ಗುಂಡು ಹಾರಿಸಿದರು. ಅದು ಹತ್ತಿರದಲ್ಲೇ ಆಟವಾಡುತ್ತಿದ್ದ ಬಾಲಕನ ತಲೆಯ ಒಂದು ಭಾಗಕ್ಕೆ ತಾಗಿತು.
ಬಾಲಕನಿಗೆ ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ‘ಆರೋಪಿಯನ್ನು ಬಂಧಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ‘ಪ್ರಜಾವಾಣಿ’ಗೆ ತಿಳಿಸಿದರು.
Boy injured in gunshot fired by coffee plantation owner
Leave a comment