ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ನಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹14.67 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಫಿರ್ಯಾದುದಾರರು 2025ರ ಸೆಪ್ಟೆಂಬರ್ 18ರಂದು ಫೇಸ್ಬುಕ್ ವೀಕ್ಷಿಸುತ್ತಿದ್ದ ವೇಳೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಟ್ರೇಡಿಂಗ್ ಕುರಿತು ಜಾಹೀರಾತು ಕಂಡು ಅದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ. ಬಳಿಕ ತೆರೆದ ಅಪ್ಲಿಕೇಶನ್ ಮೂಲಕ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಲಾಗಿದೆ.
ಮೊದಲ ಹಂತದಲ್ಲಿ 200 ಡಾಲರ್ ನೋಂದಣಿ ಶುಲ್ಕ ಸೇರಿದಂತೆ ₹26,600 ಪಾವತಿಸಿದ ಬಳಿಕ, ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಕರೆ ಮಾಡಿದ ವರುಣ್ ಖನ್ನಾ ಎಂಬ ವ್ಯಕ್ತಿ, ಬ್ಯಾಂಕ್ ಠೇವಣಿಗಿಂತ ತಮ್ಮ ಸಂಸ್ಥೆಯಲ್ಲಿ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ಹೆಚ್ಚಿನ ಲಾಭ ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಫಿರ್ಯಾದುದಾರರು ಆರಂಭದಲ್ಲಿ ₹25,000 ಹಾಗೂ ನಂತರ ಆರ್ಟಿಜಿಎಸ್ ಮೂಲಕ ₹6 ಲಕ್ಷ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.
ಬಳಿಕ ಯುಕೆಯಲ್ಲಿ ಚಿನ್ನದ ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ ಇನ್ನಷ್ಟು ಲಾಭ ಸಿಗುತ್ತದೆ ಎಂದು ಹೇಳಿ ಮತ್ತಷ್ಟು ₹5 ಲಕ್ಷ ಹೂಡಿಕೆ ಮಾಡುವಂತೆ ಒತ್ತಾಯಿಸಲಾಗಿದೆ. ಹಣವಿಲ್ಲ ಎಂದು ತಿಳಿಸಿದಾಗ, ವಿವಿಧ ಖಾತೆಗಳಿಂದ ₹5,94,085 ಫಿರ್ಯಾದುದಾರರ ಖಾತೆಗೆ ಜಮೆ ಮಾಡಿ ಅದನ್ನೂ ಮತ್ತೆ ತಾವು ಸೂಚಿಸಿದ ಖಾತೆಗಳಿಗೆ ಹೂಡಿಕೆ ಮಾಡುವಂತೆ ಮಾಡಲಾಗಿದೆ.
ನಂತರ ಟ್ರೇಡಿಂಗ್ನಲ್ಲಿ ನಷ್ಟವಾಗಿದೆ ಎಂದು ಹೇಳಿ ಹಣವನ್ನು ಹಿಂದಿರುಗಿಸದೇ ಸತಾಯಿಸಿದ್ದಾರೆ. ಅನುಮಾನಗೊಂಡ ಫಿರ್ಯಾದುದಾರರು ಸ್ನೇಹಿತರೊಂದಿಗೆ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.
ಒಟ್ಟಾರೆ VIXO Traders ಹಾಗೂ QUATINO FX 727283 ಎಂಬ ಹೆಸರಿನ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಒಟ್ಟು ₹14,67,241 ಹಣ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ರಾಣಾ ಪ್ರತಾಪ್ ಎಂಬ ವ್ಯಕ್ತಿ ಮೊಬೈಲ್ ಮೂಲಕ ಕರೆ ಮಾಡಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 40/2026ರಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
₹14.67 lakh fraud in the name of online trading
Leave a comment