ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಹಲವು ಅವಾಂತರಗಳು ಸೃಷ್ಟಿಯಾಗಿವೆ.
ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಹಲವು ವಾಸದ ಮನೆಗಳು ಜಖಂಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮದಲ್ಲಿ ಭಾರೀ ಗಾಳಿಗೆ ಮಂಜುನಾಥ ಎಂಬುವರಿಗೆ ಸೇರಿದ ತೋಟದಲ್ಲಿದ್ದ 100ಕ್ಕೂ ಹೆಚ್ಚು ಅಡಿಕೆ ಮರಗಳು ಬುಡಸಮೇತ ಧರೆಗುರುಳಿದ್ದು, ಕಷ್ಟಪಟ್ಟು ಬೆಳೆದಿದ್ದ ಮರಗಳು ನೆಲಕಚ್ಚಿರುವುದನ್ನು ಕಂಡು ಕಣ್ಣೀರು ಹಾಕುವಂತಾಗಿದೆ.
ಅತ್ತ ಕೊಪ್ಪ ತಾಲೂಕಿನ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಬೈಲ್ನಲ್ಲಿ ತೀವ್ರ ಗಾಳಿ-ಮಳೆಗೆ ವಾದಿರಾಜ್ ಎನ್ನುವವರ ವಾಸದ ಮನೆ ಮೇಲೆ ಬೃಹತ್ ಸಾಗುವಾನಿ ಹಾಗೂ ಅಡಿಕೆ ಮರಗಳು ಬಿದ್ದಿವೆ. ಮರ ಬಿದ್ದ ರಭಸಕ್ಕೆ ಮನೆಯ ಮುಂಭಾಗ ಕಾಂಪೌಂಡ್ ಹಾಗೂ ಕೊಟ್ಟಿಗೆ ಸಂಪೂರ್ಣ ಜಖಂಗೊಂಡಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತ ಚಿಕ್ಕಮಗಳೂರು ತಾಲೂಕಿನ ಕಾರೆಹಟ್ಟಿ ಗ್ರಾಮದಲ್ಲಿ ಪ್ರಶಾಂತಿ ಎಂಬುವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮೇಲ್ಟಾವಣಿ ಹಾನಿಯಾಗಿದೆ. ಮರ ಬೀಳುವ ಸಂದರ್ಭದಲ್ಲಿ ಮನೆಯೊಳಗಿದ್ದವರು ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸದೆ ಪಾರಾಗಿದ್ದಾರೆ.
ಇನ್ನೊಂದೆಡೆ, ಮೂಡಿಗೆರೆ ತಾಲೂಕಿನಾದ್ಯಂತ ಮಳೆ ಹೆಚ್ಚಾಗುತ್ತಿರುವ ನಡುವೆಯೇ ಮುಗ್ರಹಳ್ಳಿ ಗ್ರಾಮದ ಹೇಮಾವತಿ ನದಿ ಸೇತುವೆಯ ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಸುರಕ್ಷತೆಯನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮುಖ್ಯ ರಸ್ತೆಯ ಪಕ್ಕದಲ್ಲೇ ಸುಮಾರು 20 ಅಡಿ ಆಳದ ಗುಂಡಿಗಳನ್ನು ತೋಡಲಾಗಿದ್ದರೂ, ಮುನ್ನೆಚ್ಚರಿಕೆಯಾಗಿ ಯಾವುದೇ ಬ್ಯಾರಿಕೇಡ್ಗಳು ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ಇದರಿಂದ ವಾಹನ ಸವಾರರು ಹಾಗೂ ಜಾನುವಾರುಗಳು ಆಕಸ್ಮಿಕವಾಗಿ ಗುಂಡಿಗೆ ಬಿದ್ದು ಜೀವಹಾನಿಯಾಗುವ ಭೀತಿ ಎದುರಾಗಿದ್ದು, ಕಾಮಗಾರಿಯನ್ನು ತಕ್ಷಣವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ತೀವ್ರ ಆಗ್ರಹ ಮಾಡಿದ್ದಾರೆ.
Heavy winds and rain disrupt normal life in the Malnad region
Leave a comment