ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು ವಿದ್ಯುತ್ ಕಂಬಗಳ ಸಹಿತ ರಸ್ತೆಗೆ ಉರಳಿದವು. ಹಲವು ಕಟ್ಟಡಗಳ ಚಾವಣಿ ಹಾರಿ ಹೋಗಿವೆ.
ಮಧ್ಯರಾತ್ರಿ 1ಗಂಟೆ ಸುಮಾರಿಗೆ ಮಳೆ ಆರಂಭವಾಯಿತು. ಮಳೆಗಿಂತ ಬಿರುಗಾಳಿಯೇ ಜೋರಾಗಿತ್ತು. ಜತೆಗೆ ಗುಡುಗು ಮತ್ತು ಸಿಡಿಲಿನ ಅಬ್ಬರ ಜನರನ್ನು ಆತಂಕಗೊಳಿಸಿತು.
ನಗರದ ಕೋಟೆ ಬಡಾವಣೆ, ಹೊಸಮನೆ, ಜಯನಗರ, ಬೈಪಾಸ್ ರಸ್ತೆ, ಜ್ಯೋತಿನಗರದಲ್ಲಿ ದೊಡ್ಡ ಮರಗಳು ನೆಲಕ್ಕೆ ಉರುಳಿದವು. ಮರಗಳು ಬೀಳುವಾಗ ವಿದ್ಯುತ್ ತಂತಿಗಳು ಸಿಕ್ಕಿಕೊಂಡು ಕಂಬಗಳು ಮುರಿದು ಬಿದ್ದವು. ಅವುಗಳನ್ನು ತೆರವುಗೊಳಿಸುವ ಕಾರ್ಯ ಶನಿವಾರ ಸಂಜೆ ತನಕವೂ ನಡೆಯಿತು.
ಒಂದೇ ಗಂಟೆ ಮಳೆಗೆ ನಗರದಲ್ಲಿ 25 ವಿದ್ಯುತ್ ಕಂಬಗಳು, 16 ಮರಗಳು, 2 ವಿದ್ಯುತ್ ಪರಿವರ್ತಕಗಳು ಧರೆಗೆ ಉರುಳಿದ್ದವು. ನಗರಸಭೆ, ಮೆಸ್ಕಾಂ, ಅರಣ್ಯ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ, ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ಆಯುಕ್ತ ಬಿ.ಸಿ. ಬಸವರಾಜ್, ತಹಶೀಲ್ದಾರ್ ರೇಷ್ಮಾಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಜಿಲ್ಲಾ ಆಟದ ಮೈದಾನದ ವ್ಯಾಯಾಮ ಶಾಲೆಯ ಮೇಲ್ಬಾಗದ ಕೊಠಡಿಯ ಶೀಟುಗಳು ಹಾರಿ ಹೋಗಿವೆ. ಎಚ್.ಸಿ. ಸುರೇಂದ್ರಗೌಡ ಅವರ ಮನೆಗೆ ಸಿಡಿಲು ಬಡಿದು ಚಾವಣಿಗೆ ಹಾನಿಯಾಗಿದೆ. ಚಾವಣಿಯ ಹೆಂಚು ಮನೆಯ ಮಲಗುವ ಕೋಣೆಯ ತುಂಬಾ ತುಂಬಿಕೊಂಡಿದ್ದವು. ಮಳೆ ಬಂದಾಗ ದಂಪತಿ ಎಚ್ಚರವಾಗಿದ್ದರಿಂದ ಮನೆಯಲ್ಲಿದ್ದವರಿಗೆ ತೊಂದರೆಯಾಗಿಲ್ಲ.
ಜ್ಯೋತಿ ನಗರದಲ್ಲಿರುವ ಕ್ರೀಡಾ ಇಲಾಖೆ ಆವರಣದಲ್ಲಿನ ವಸತಿ ನಿಲಯದ ಪಕ್ಕದ ಮರವೊಂದು ಮನೆಯೊಂದರ ಮೇಲೆ ಬಿದ್ದಿದೆ. ಸ್ಥಳಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು ಕ್ಲಬ್ ಕಾಂಪೌಂಡ್ ಮೇಲೆ ದೊಡ್ಡ ಮರವೊಂದು ಬಿದ್ದು, ಗೋಡೆ ಕುಸಿದಿದೆ. ನಗರದ ಸುತ್ತಮುತ್ತಲ ಗ್ರಾಮಗಳಾದ ಹಿರೇಗೌಜ, ಕೆಂಗನಹಳ್ಳಿ, ಕರಿಸಿದ್ದನಹಳ್ಳಿ ಸೇರಿ ಹಲವೆಡೆ ಮನೆಗಳ ಹೆಂಚು ಹಾರಿ ಹೋಗಿವೆ.
The entire city is shaken by heavy rain and thunder.
Leave a comment