ಚಿಕ್ಕಮಗಳೂರು: ಜಿಗಣೆಯಂತೆ ರಕ್ತ ಹೀರುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಎಂದರೆ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ರಕ್ತ ಹೀರುವ ಪಕ್ಷ. ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಯಾರು ಸಹ ತೃಪ್ತಿಯಿಂದ ಇಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಹೀನ ಸಾಧನೆ ಮಾಡಿ ಇದೀಗ ಸಾಧನ ಸಮಾವೇಶ ನಡೆಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದರು.
ಶಾಂತಿಯ ತೋಟದಲ್ಲಿ ಅಶಾಂತಿ ಮೂಡಿಸುವುದು ಕಾಂಗ್ರೆಸ್ ಸಂಸ್ಕೃತಿ. ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ. ಒಂದು ಶೂನ್ಯ ಸರ್ಕಾರ ಜನರ ಜೀವನದ ಜೊತೆ ಆಟವಾಡುತ್ತಿದೆ. ಇದನ್ನೇ ತಮ್ಮ ಸಾಧನೆ ಎಂದುಕೊಂಡು ಸಾಧನಾ ಸಮಾವೇಶ ಮಾಡುತ್ತಿರಬೇಕು ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ತೈಲದ ಕೊರತೆ ಇದೆ. ಶೇ. 80ರಷ್ಟು ತೈಲವನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಯುದ್ಧದ ಕಾರಣದಿಂದಾಗಿ ತೈಲ ಆಮದು ದುರ್ಲಭವಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಿತವಾಗಿ ತೈಲಬಳಕೆ ಮಾಡುವಂತೆ ಸಲಹೆ ನೀಡಿದ್ದಾರೆಯೇ ಹೊರತು ಕಟ್ಟು ನಿಟ್ಟಿನ ಆದೇಶ ಮಾಡಿಲ್ಲ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಏರಿಕೆಯಾಗಿದೆ. ಹೀಗಾಗಿ ಇದುವರೆಗೂ ನಾಲ್ಕು ಲಕ್ಷ ಕೋಟಿ ರೂ. ಗೂ ಹೆಚ್ಚು ಹೊರೆಯಾಗಿದ್ದರೂ ಜನರಿಗೆ ಹೊರೆಯಾಗಬಾರದು ಎಂದು ಪ್ರಧಾನಿ ಮೋದಿ ಅವರು ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಹಿಂದೆಯೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಬೇಕಿತ್ತು. ಆದರೆ ಟ್ಯಾಕ್ಸ್ ಇಡಿಕೆ ಮಾಡುವ ಮೂಲಕ ನರೇಂದ್ರ ಮೋದಿ ಅವರು ಜನರ ಮೇಲಿನ ಹೊರೆ ಇಳಿಸಿದ್ದರು. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ಯುದ್ಧವೂ ಇರಲಿಲ್ಲ. ಆದರೆ ಅಂದು ವೀರಪ್ಪ ಮೊಯ್ಲಿ ಅವರು ವಾರ್ಷಿಕ ಆರು ಸಿಲಿಂಡರ್ ನೀಡುವುದಾಗಿ ಹೇಳಿದ್ದರು. ಕಾಂಗ್ರೆಸ್ ನಾಯಕರು ಮೊದಲು ಇದಕ್ಕೆ ಸ್ಪಷ್ಟನೆ ನೀಡಲಿ ಎಂದು ತಿರುಗೇಟು ನೀಡಿದರು.
ಅಂಬೇಡ್ಕರ್ ಅವರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಸರ್ವೇ ಜನ ಸುಖಿನೋ ಭವಂತು ಎನ್ನುವುದನ್ನು ಸಂವಿಧಾನದ ಮೂಲಕ ಮಾಡಿದ್ದಾರೆ. ಅದೇ ರೀತಿಯ ಕೆಲಸವನ್ನು ಬಿಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸಿ.ಟಿ.ರವಿ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭೀಮೋತ್ಸವ ಕಾರ್ಯಕ್ರಮದ ಮೂಲಕ ಸಾಮರಸ್ಯ ಮೂಡಿಸುವ ಜೊತೆಗೆ ತಳ ಸಮುದಾಯಗಳನ್ನು ಗುರುತಿಸಿ ಜಾತಿಭೇದ ಮಾಡದೆ ಅಸ್ಪೃಶ್ಯತೆ ತೊಡೆದು ಹಾಕುವ ರೀತಿ ಸರ್ವರನ್ನು ತನ್ನ ಮನೆಗೆ ಕರೆದು ಮನೆ ತುಂಬಿಸಿಕೊಳ್ಳುವ ಕೆಲಸವನ್ನು ಸಿ.ಟಿ.ರವಿ ಅವರು ಮಾಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.
If there is a blood-sucking party it is Congress.
Leave a comment