ಚಿಕ್ಕಮಗಳೂರು: ರೈತನಿಗೆ ನೋಟಿಸ್ ಕೂಡ ನೀಡದೆ ಜೆಸಿಬಿ ವಶಕ್ಕೆ ಪಡೆದು ಹರಾಜು ಮಾಡಲಾಗಿದೆ ಎಂದು ಆರೋಪಿಸಿ ಎಚ್ಡಿಎಫ್ಸಿ ಬ್ಯಾಂಕ್ ಎದುರು ನಡೆಯುತ್ತಿರುವ ಪ್ರತಿಭಟನೆಗೆ ಮೂರು ತಿಂಗಳು ಪೂರ್ಣಗೊಂಡಿದ್ದು, ರೈತ ಮತ್ತು ದಲಿತ ಸಂಘಟನೆಗಳ ಮುಖಂಡರು ಬುಧವಾರ ಬ್ಯಾಂಕ್ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಂಜುನಾಥ್ ಕುಟುಂಬ ನಿರಂತರವಾಗಿ ಧರಣಿ ನಡೆಸಿದ್ದು, ಗುರುವಾರ ದಲಿತ ಮತ್ತು ರೈತ ಸಂಘಟನೆಗಳ ಮುಖಂಡರು ಬೆಂಬಲ ನೀಡಿ ಜಾಥಾ ನಡೆಸಿದರು. ನಗರದ ಹನುಮಂತಪ್ಪ ವೃತ್ತದಿಂದ ಎಚ್ಡಿಎಫ್ಸಿ ಬ್ಯಾಂಕ್ ತನಕ ಮೆರವಣಿಗೆ ನಡೆಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಗೌಡನಹಳ್ಳಿ ವಾಸಿ ಮಂಜುನಾಥ್ ಅವರು ಜೆಸಿಬಿ ಖರೀದಿಸಲು ನಗರದ ಎಂ.ಜಿ. ರಸ್ತೆಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ನಿಂದ 2023ರ ಡಿ. 12ರಂದು ₹29 ಲಕ್ಷ ಸಾಲ ಪಡೆದಿದ್ದರು. ಒಟ್ಟು ₹36 ಲಕ್ಷ ಬಂಡವಾಳ ಹೂಡಿದ್ದರು. ಸಾಲದ ಕಂತು 58 ತಿಂಗಳು ಇದ್ದು, ಪ್ರತಿ ತಿಂಗಳು ₹65,065 ಪಾವತಿಸಲು ಒಪ್ಪಿಸಿದ್ದರು. ಅದರಂತೆ ಸಾಲದ ಕಂತು ₹17.50 ಲಕ್ಷ ಪಾವತಿಸಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಕಂತು ತೀರಿಸಲು ಸಾಧ್ಯವಾಗಿಲ್ಲ ಎಂಬ ನೆಪದಲ್ಲಿ ಜೆಸಿಬಿಯನ್ನು ಜಪ್ತಿ ಮಾಡಿದ್ದಾರೆ ಎಂದು ದೂರಿದರು.
ಬ್ಯಾಂಕಿಗೆ ಹೋಗಿ ವಿಚಾರಿಸಿದರೆ ₹50 ಲಕ್ಷ ಪಾವತಿಸಿದರೆ ಜೆಸಿಬಿ ವಾಪಸ್ಸು ಕೊಡುವುದಾಗಿ ತಿಳಿಸಿದ್ದಾರೆ. ಖಾಸಗಿ ಸಾಲ ಪಡೆದು ₹50 ಲಕ್ಷ ಹೊಂದಿಸಿ ಬ್ಯಾಂಕಿಗೆ ಪಾವತಿಸಲು ಮುಂದಾಗಿದ್ದು, ಅಧಿಕಾರಿಗಳು ಜೆಸಿಬಿ ಎಲ್ಲಿದೆ ಎಂಬುದನ್ನು ತಿಳಿಸಲಿಲ್ಲ ಎಂದು ಹೇಳಿದರು.
ಜೆಸಿಬಿ ಹರಾಜು ಮಾಡಿ ಸಾಲದ ಮೊತ್ತಕ್ಕೆ ಜಮೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಸಾಲ ಮರುಪಾವತಿಗೆ ರೈತ ಸಿದ್ದವಿದ್ದರೂ ಅಧಿಕಾರಿಗಳು ಹರಾಜು ಮಾಡಿದ್ದಾರೆ. ಇದರಿಂದ ಮಂಜುನಾಥ್ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಮೂರು ತಿಂಗಳಿಂದ ಮಂಜುನಾಥ್ ಕುಟುಂಬ ಬ್ಯಾಂಕ್ ಎದುರು ಧರಣಿ ನಡೆಸುತ್ತಿದೆ. ಆದರೆ, ಬ್ಯಾಂಕ್ ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಯಾಗಲಿ, ಜಿಲ್ಲೆಯ ಯಾವುದೇ ಜನಪ್ರತಿನಿಧಿಯಾಗಲಿ ಮಂಜುನಾಥ್ ಅವರಿಗೆ ಆಗಿರುವ ಅನ್ಯಾಯ ಕೇಳಲಿಲ್ಲ. ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯ ಸಿಗುವ ತನಕ ಧರಣಿ ಬಿಡುವುದಿಲ್ಲ ಎಂದು ಮಂಜುನಾಥ್ ಕುಟುಂಬ ಹೇಳುತ್ತಿದೆ. ಅವರಿಗೆ ನ್ಯಾಯ ದೊರಕಿಸುವ ಪ್ರಯತ್ನವನ್ನು ಜಿಲ್ಲಾಧಿಕಾರಿ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡರಾದ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಸುನಿಲ್ಕುಮಾರ್, ಉದ್ದೇಗೌಡ, ಕೃಷ್ಣಮೂರ್ತಿ, ಛಲವಾದಿ ರಘು, ಕೆಂಪಮ್ಮ, ರಾಕೇಶ್ ಭಾಗವಹಿಸಿದ್ದರು.
Protesters arrested in front of HDFC Bank
Leave a comment