ಮೂಡಿಗೆರೆ: ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ಹಾಗೂ ಸರಳ ಸಾಮೂಹಿಕ ವಿವಾಹ ಸಮಿತಿ ವತಿಯಿಂದ ಮೇ.೧೪ ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ೧೦ ಜೋಡಿಗಳ ಸರಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವೆ ಹಾಗೂ ಸಮಿತಿ ಅಧ್ಯಕ್ಷೆ ಮೋಟಮ್ಮ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಬೇಡ್ಕರ್ ಜಯಂತಿ ಕೇವಲ ಘೋಷಣೆ ಮತ್ತು ಭಾಷಣಗಳಿಗೆ ಸೀಮಿತವಾಗಬಾರದು. ಈ ದೃಷ್ಟಿಯಿಂದ ಅಂಬೇಡ್ಕರ್ ಅವರ ಆಶಯವನ್ನು ಪೂರೈಸುವ ಸಲುವಾಗಿ ಎಲ್ಲಾ ಸಮುದಾಯದ ಬಡ ಕುಟುಂಬಕ್ಕೆ ಅನುಕೂವಾಗಲು ಸರಳ ಸಾಮೂಹಿಕ ವಿವಾಹ ರೂಪಿಸಲಾಗಿದೆ ಎಂದರು.
ಅರ್ಜಿ ಸಲ್ಲಿಸುವ ವದುವರರು ತಾಲೂಕು ಕಚೇರಿ ಹಿಂಭಾಗದಲ್ಲಿರುವ ಉದ್ಯೋಗಸ್ತ ಮಹಿಳಾ ವಸತಿ ನಿಲಯದಲ್ಲಿ ಅರ್ಜಿ ಪಡೆದು, ಮೇ.೫ರೊಳಗೆ ಅರ್ಜಿ ಸಲ್ಲಿಸಬೇಕು. ಜತೆಗೆ ತಮ್ಮ ವ್ಯಾಪ್ತಿಯ ಪಂಚಾಯಿತಿಯಿಂದ ಕಡ್ಡಾಯವಾಗಿ ಅವಿವಾಹಿತ ದೃಢೀಕರಣ ಪತ್ರ ನೀಡಬೇಕು. ವಿವಾಹ ೧೦ ಜೋಡಿಗೆ ಸೀಮಿತ ಮಾಡಿರುವುದರಿಂದ ಮೊದಲು ಅರ್ಜಿ ಸಲ್ಲಿಸಿದ ಮದೂವರರು ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮಂಗಳೂರಿನ ವಿ.ವಿ.ಕಾಲೇಜಿನ ಅಸಿಸ್ಟೆಂಟ್ ಪ್ರೋಪೇಸರ್ ಸಭಿತಾ ಗುಣ್ಮಿ, ಚಲನಚಿತ್ರ ನಟ ಚೇತನ್, ಗೌರಿಗದ್ದೆ ಆಶ್ರಮದ ಅವದೂತ ವಿನಯ್ ಗುರೂಜಿ ಆಗಮಿಸಲಿದ್ದಾರೆ. ಅಲ್ಲದೇ ಸೋಬಾನೆ, ಕೋಲಾಟ, ಜಾನಪದ ನೃತ್ಯ ಸೇರಿದಂತೆ ಮಲೆನಾಡಿನ ಸಂಸಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವದೂವರರಿಗೆ ಆಶೀರ್ವಾಧಿಸುವ ಮೂಲಕ ಅಂಬೇಡ್ಕರ್ ಆಶಯಕ್ಕೆ ಬಂಬಲ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸಮಿತಿ ನಿರ್ದೇಶಕಿ ಸೀತಮ್ಮ, ಕಲಾವಿದ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
Applications invited for simple mass marriage on May 14th
Leave a comment