ಚಿಕ್ಕಮಗಳೂರು: ತಾಲೂಕಿನ ಸಗನಿಪುರ ರಸ್ತೆಯ ಕೈವಾರ ಗಿರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀಯೋಗಿನರೇಯಣ ಯತೀಂದ್ರ ಕೈವಾರ ತಾತಯ್ಯನವರ ನೂತನ ದೇವಾಲಯ ಉದ್ಘಾಟನೆ ಹಾಗೂ ರಾಜಗೋಪುರ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ ಏ. ೨೮ ಮತ್ತು ೨೯ಕ್ಕೆ ನಡೆಯಲಿದೆ ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. ೨೮ರಂದು ಸಂಜೆ ೪.೩೦ರಿಂದ ಶ್ರೀಗಣಪತಿ ಹೋಮದೊಂದಿಗೆ ದೇವಾಲಯ ಪ್ರವೇಶ, ದ್ವಾರಪೂಜೆ, ಸ್ವಸ್ತಿ ಪುಣ್ಯ ಹೋಮ ಹಮನ ನಡೆಯಲಿದೆ. ಸಂಜೆ ೬ಗಂಟೆಗೆ ಗಂಗೆ ಪೂಜೆ, ಯಾಗಶಾಲಾ ಪ್ರವೇಶ, ಗುರುವಂದನಾ, ಸಭಾ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ರಾತ್ರಿ ೮ಗಂಟೆಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಏ. ೨೯ರಂದು ಬೆಳಗ್ಗೆ ೫.೩೦ರಿಂದ ೭ಗಂಟೆಯೊಳಗೆ ಗಂಗೆ ಪೂಜೆ, ನಂತರ ಗಣಪತಿ ಪೂಜೆಯೊಂದಿಗೆ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಬ್ರಾಹ್ಮಿ ಮಹೂರ್ತದಲ್ಲಿ ಪೀಠಾನ್ಯಾಸ, ರತ್ನಾನ್ಯಾಸ, ಪ್ರಾಣ ಪ್ರತಿಷ್ಠೆ, ನೇತ್ರೋನ್ಮಿಲನ, ನಾಡಿ ಸಂದಾನ, ನಿರೀಕ್ಷಣೆ, ವೇದಿಕಾರಾಧನೆ, ಮೂಲಮಂತ್ರ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಏ. ೨೯ರಂದು ಬೆಳಗ್ಗೆ ೯ ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮ್ ಅವರು ದೇವಸ್ಥಾನದ ಉದ್ಘಾಟನೆ ನಡೆಯಲಿದ್ದಾರೆ. ಬಳಿಕ ನಡೆಯುವ ಧರ್ಮಸಭೆಯಲ್ಲಿ ಗೌರಿಗದ್ದೆ ಆಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕುಣಿಗಲ್ ಶ್ರೀಬಸವೇಶ್ವರ ಮಠದ ಡಾ.ಧನಂಜಯ ಗುರೂಜಿ, ಬಸವತತ್ವ ಪೀಠದ ಶ್ರೀಬಸವಮರುಳಸಿದ್ಧ ಸ್ವಾಮೀಜಿ, ಶ್ರೀಶಂಕರ ದೇವರ ಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಚ್.ಡಿ.ತಮ್ಮಯ್ಯ, ಎಂಎಲ್ಸಿ ಡಾ. ಸಿ.ಟಿ.ರವಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಲಿಜ ಸಮಾಜದ ಮುಖಂಡರಾದ ದೇವರಾಜ್, ಡಾ.ಕುಮಾರ್ ಆರ್.ಶೆಟ್ಟಿ, ಮಹೇಶ್ ಬಾಬು, ಯಶವಂತ್, ಪ್ರಸನ್ನ ಮತ್ತಿತರರಿದ್ದರು.
Kaivara Tataiah’s temple inauguration today
Leave a comment