ಕಡೂರು: ಸಕ್ಕರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕುನ್ನಾಳು ಗ್ರಾಮದಲ್ಲಿ ಮೊಬೈಲ್ ಸಂದೇಶ ಕಳುಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು ಈ ಕುರಿತು ಪರಸ್ಪರ ದೂರುಗಳು ದಾಖಲಾಗಿವೆ.
ಒಂದು ದೂರಿನಲ್ಲಿ ಗಾಯಾಳು ಚಂದ್ರಕಲಾ ಅವರು ತಮ್ಮ ಮಗ ನವೀನ್ ಕುಮಾರ್ ಪಕ್ಕದ ಮನೆಯ ಪ್ರೇಮಾ ಎಂಬುವವರಿಗೆ ಮೆಸೇಜ್ ಮಾಡುತ್ತಿದ್ದ ವಿಚಾರವಾಗಿ ಧರಣೇಶ, ಪ್ರೇಮಾ, ಬಸವರಾಜ್ ಹಾಗೂ ಲತಾ ಎಂಬುವವರು ಏಪ್ರಿಲ್ 25ರ ಬೆಳಿಗ್ಗೆ ಮನೆಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ವೇಳೆ ತಡೆಯಲು ಹೋದ ತಮ್ಮ ಕೂದಲು ಹಿಡಿದು ಎಳೆದಾಡಿ ಬಟ್ಟೆ ಹರಿದು ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಕಲಾ ಆರೋಪಿಸಿದ್ದು ಸದ್ಯ ಅವರು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರೇಮಾ ಅವರು ಕೂಡ ದೂರು ನೀಡಿದ್ದು ಅಂದು ಬೆಳಿಗ್ಗೆ ಚಂದ್ರಕಲಾ, ಅವರ ಪತಿ ಶಿವೇಗೌಡ ಹಾಗೂ ಮಕ್ಕಳಾದ ನವೀನ್ ಮತ್ತು ಚಂದ್ರಶೇಖರ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ತಮ್ಮ ಮನೆಯ ಮುಂದೆ ಬಂದು ಅಶ್ಲೀಲವಾಗಿ ನಿಂದಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಈ ನಾಲ್ವರು ಮನೆಯೊಳಗೆ ನುಗ್ಗಿ ತನ್ನ ಪತಿ ಧರಣೇಶ್ ಅವರನ್ನು ಕೆಳಗೆ ಬೀಳಿಸಿ ಹೊಡೆದಿದ್ದಲ್ಲದೆ ತಂಗಿ ಲತಾ ಅವರ ಮೇಲೂ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಈ ಎರಡು ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಕ್ಕರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
A fierce fight between two families
Leave a comment