ಚಿಕ್ಕಮಗಳೂರು: ನಗರ ಸಭೆ ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಪಾವತಿ ಅನುದಾನ ಸೇರಿದಂತೆ ವಾರ್ಷಿಕ ಕೇವಲ 58 ಕೋಟಿ ರು.ನಷ್ಟು ಆದಾಯ ಹೊಂದಿರು ಚಿಕ್ಕಮಗಳೂರು ನಗರ ಸಭೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನವನ್ನು ನಂಬಿಕೊಂಡು ಬರೋಬ್ಬರಿ 153.54 ಕೋಟಿ ರು. ವೆಚ್ಚದ ಬಜೆಟ್ ಮಂಡಿಸಿದೆ.
ಇದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 30 ಕೋಟಿ ರು. ನಷ್ಟು ಬಜೆಟ್ ಗಾತ್ರವನ್ನು ಹೆಚ್ಚಿಸಿಕೊಂಡಿದೆ. ಚಿಕ್ಕಮಗಳೂರು ನಗರ ಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಬಿ.ಶೀಲಾ ದಿನೇಶ್ 2026-27ನೇ ಸಾಲಿನ ಆಯವ್ಯಯ ಮಂಡಿಸಿದರು. 2026-27ನೇ ಸಾಲಿನಲ್ಲಿ ಸ್ವಂತ ಆದಾಯದ ಮೂಲ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ, ಸರ್ಕಾರಿ ಸಂಸ್ಥೆಗಳಿಗೆ ಸಾಲ ಸೇರಿದಂತೆ ಒಟ್ಟು 156.15 ಕೋಟಿ ರು. ಆದಾಯ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ 153.54 ಕೋಟಿ ರು. ವೆಚ್ಚದ ಯೋಜನೆ ರೂಪಿಸಿಕೊಂಡು ಬಜೆಟ್ ಮಂಡಿಸಲಾಗಿದೆ. 2.60 ಕೋಟಿ ರು. ಉಳಿತಾಯ ಬಜೆಟ್ ಮಂಡಿಸಲಾಯಿತು.
ಕಳೆದ ವರ್ಷ 129.04 ಕೋಟಿ ರು. ಆದಾಯ ನಿರೀಕ್ಷೆ ಮಾಡಿ, 123.92 ಕೋಟಿ ರು. ವೆಚ್ಚದ ಯೋಜನೆ ರೂಪಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ರಾಜಸ್ವ ಸ್ವೀಕೃತಿಯಲ್ಲಿ ಸುಮಾರು 10 ಕೋಟಿ ರು, ಸೇರಿದಂತೆ ವಿವಿಧ ವಿಭಾಗದಲ್ಲಿ ಆದಾಯ ಹೆಚ್ಚಳ ತೋರಿಸಿಕೊಂಡು ಸುಮಾರು 30 ಕೋಟಿ ರು. ಮೊತ್ತದ ಬಜೆಟ್ ಗಾತ್ರ ಹೆಚ್ಚಿಸಲಾಗಿದೆ.
ನಗರ ಸಭೆಗೆ ಆಸ್ತಿ ತೆರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಈ ಮೂಲದಿಂದ 22 ಕೋಟಿ ರು. ನಿರೀಕ್ಷೆ ಮಾಡಲಾಗಿದೆ. ಇರೊಂದಿಗೆ ನೀರಿನ ಸರಬರಾಜು ಶುಲ್ಕ, ಸಿಬ್ಬಂದಿಗೆ ವೇತನಕ್ಕೆ ಸರ್ಕಾರ ನೀಡಿವ ಎಸ್ಎಫ್ಸಿ ವೇತನ ಬಾಬ್ತು, ಎಸ್ಎಫ್ಸಿ ಮುಕ್ತ ನಿಧಿ, ವಿದ್ಯುತ್ ಅನುದಾನ ಸೇರಿದಂತೆ 58 ಕೋಟಿ ರು. ನಷ್ಟು ಖಾಯಂ ಆದಾಯ ಹೊಂದಿದೆ. ಇದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಆದಾಯ ನಂಬಿಕೊಂಡು ಆದಾಯದ ಎರಡು ಪಟ್ಟು ಹೆಚ್ಚಿನ ಮೊತ್ತದ ಬಜೆಟ್ ಮಂಡಿಸಿದೆ.
ನಗರಸಭೆ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ನಕ್ಷಾ ಯೋಜನೆಯಡಿ ಸರ್ವೆ ನಡೆಸಲಾಗುತ್ತಿದೆ. ಸರ್ವೆ ಪೂರ್ಣಗೊಂಡ ಬಳಿಕ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣ ಗೊಳಿಸಲಾಗುವುದು. ಆಗ ನಗರ ಸಭೆಗೆ ಬರುವ ಆಸ್ತಿ ತೆರಿಗೆ ಶೇ.50ರಷ್ಟು ಹೆಚ್ಚಾಗಲಿದೆ. ಸದ್ಯ 22 ಕೋಟಿ ರು. ಬರುತ್ತಿದ್ದು, ಸುಮಾರು 50 ಕೋಟಿ ರು.ಗೆ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.
ಜತೆಗೆ, ನಾಗರಿಕರು ತಮ್ಮ ಮನೆ ಬಾಗಿಲಿನಲ್ಲಿಯೇ ಚಲನ ಪಡೆದು ಯುಪಿಐ ಮೂಲಕ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಕಂದಾಯ ವಸೂಲಾತಿ ಜವಾಬ್ದಾರಿಯನ್ನು ಸ್ಥಳೀಯ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಕಸದ ಸಂಗ್ರಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಕಳೆದ ಜನವರಿಯಿಂದಲೇ ಕಸ ಸಂಗ್ರಹಣೆ ಜವಾಬ್ದಾರಿಯನ್ನು ನಗರಸಭೆಯೇ ವಹಿಸಿಕೊಂಡಿದೆ. ಕಸ ಸಂಗ್ರಹಣೆ ಶುಲ್ಕ 2.50 ಕೋಟಿ. ರು. ವಸೂಲಿಯಾಗುವ ನಿರೀಕ್ಷೆಯಿದೆ. ಕಳೆದ ಆರ್ಥಿಕ ವರ್ಷದಲ್ಲಿ ಹಸಿ ಕಸದಿಂದ 200 ಟನ್ ಸಾವಯವ ಗೊಬ್ಬರ ತಯಾರಿಸಿ 6 ಲಕ್ಷ ರು. ಆದಾಯ ಗಳಿಸಲಾಗಿದೆ.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಲಲಿತಾ ನಾಯ್ಕ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು, ಸದಸ್ಯರಾದ ಟಿ.ರಾಜಶೇಖರ್, ಲಕ್ಷ್ಮಣ್, ಇಂದಿರಾ, ಮುನೀರ್, ಕವಿತಾ ಶೇಖರ್, ಸುಜಾತ ಶಿವಕುಮಾರ್ ಸೇರಿದಂತೆ ಇತರ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
Rs 2.60 crore savings budget presented in the Municipal Council
Leave a comment