ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಮಾನವೀಯತೆ ಮೆರೆಯುವ ಘಟನೆ ನಡೆದಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಗಗನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ, ತನ್ನ ಧೈರ್ಯದಿಂದ ಪರೀಕ್ಷೆಯನ್ನು ಬರೆದಿದ್ದಾನೆ.
ಪರೀಕ್ಷೆ ಮಧ್ಯೆ ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ತಕ್ಷಣ ಬಣಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಡ್ರಿಪ್ ಹಾಕಿಸಿಕೊಂಡ ಸ್ಥಿತಿಯಲ್ಲೇ ವಿದ್ಯಾರ್ಥಿ ಮತ್ತೆ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾನೆ.
ಇಂದು ಎಸ್ಎಸ್ಎಲ್ಸಿ ಕೊನೆಯ ಪರೀಕ್ಷೆಯಾಗಿದ್ದು, ಯಾವುದೇ ಪರಿಸ್ಥಿತಿಯಲ್ಲೂ ಪರೀಕ್ಷೆ ತಪ್ಪಿಸಿಕೊಳ್ಳಬಾರದೆಂಬ ಸಂಕಲ್ಪದಿಂದ ಗಗನ್ ಈ ಸಾಹಸ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಸಮಾಜ ಸೇವಕ ಆರೀಫ್ ಮಾನವೀಯತೆ ತೋರಿಸಿ, ವಿದ್ಯಾರ್ಥಿಗೆ ತಕ್ಷಣ ಚಿಕಿತ್ಸೆ ಒದಗಿಸಿ, ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತಂದು ಸಹಾಯ ಮಾಡಿದ್ದಾರೆ.
ವಿದ್ಯಾರ್ಥಿಯ ಧೈರ್ಯ ಮತ್ತು ಸಮಾಜ ಸೇವಕರ ಮಾನವೀಯತೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
A sick student wrote the SSLC exam.
Leave a comment