ಕಡೂರು: ತಾಲ್ಲೂಕಿನ ಪಂಚನಹಳ್ಳಿ ಸಮೀಪದ ಬಿ.ಟಿ. ಮಲ್ಲೇನಹಳ್ಳಿ ಬಳಿ ದಿನಬಳಕೆಯ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿಯಿಂದ ಗ್ರಾಮಸ್ಥರು ಸರಂಜಾಮು ದೋಚಿದ ಘಟನೆ ಶನಿವಾರ ನಡೆದಿದೆ.
ಚಿಕ್ಕಬಳ್ಳಾಪುರದಿಂದ ಕಡೂರು ಎಪಿಎಂಸಿಯ ಏಜೆನ್ಸಿಗೆ ಸೋಪು, ಸೋಪಿನ ಪುಡಿ, ಶಾಂಪು, ಪೌಡರ್, ಕ್ರೀಮ್ ಸೇರಿದಂತೆ ವಿವಿಧ ದಿನ ಬಳಕೆಯ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ, ಗ್ರಾಮದ ತಿರುವಿನಲ್ಲಿ ಸಿಲುಕಿಕೊಂಡಿತ್ತು.
ಚಾಲಕ ಸಹಾಯಕ್ಕಾಗಿ ಪಕ್ಕದ ಗ್ರಾಮಕ್ಕೆ ತೆರಳಿದ್ದ ವೇಳೆ, ಸುತ್ತಮುತ್ತಲಿನ ಬಿ.ಟಿ. ಮಲ್ಲೇನಹಳ್ಳಿ, ತಿಮ್ಮಲಾಪುರ, ಚೌಡಿಪಾಳ್ಯ, ದೊಡ್ಡಹಟ್ಟಿ, ದೋಣನಕಟ್ಟೆ ಕಣಕಟ್ಟೆ ಗ್ರಾಮದ ಕೆಲವರು ಲಾರಿಯಲ್ಲಿದ್ದ ಸಾಮಗ್ರಿ ಹೊತ್ತೊಯ್ದಿದ್ದರು.
ಈ ಸಂಬಂಧ ಲಾರಿ ಚಾಲಕ ಮತ್ತು ಮಾಲೀಕ ಪಂಚನಹಳ್ಳಿ ಪೊಲೀಸರಲ್ಲಿ ದೂರು ಸಲ್ಲಿಸಿದ್ದಾರೆ. ಭಾನುವಾರ ಬೆಳಿಗ್ಗೆಯಿಂದಲೇ ಕಾರ್ಯಪ್ರವೃತ್ತರಾದ ಪೊಲೀಸರು ತಮಗೆ ದೊರೆತ ಮಾಹಿತಿ ಅನುಸಾರ ಕೆಲವು ಗ್ರಾಮಗಳಿಗೆ ತೆರಳಿ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿಸಿ, ಸಾಮಗ್ರಿ ಹಿಂತಿರುಗಿಸುವಂತೆ ಸೂಚಿಸಿದರು.
ಪಂಚನಹಳ್ಳಿ ಪಿಎಸ್ಐ ಜಿ. ಮಂಜುನಾಥ್, ಲಾರಿಯ ಮಾಲೀಕ ಮತ್ತು ಚಾಲಕರ ಉಪಸ್ಥಿತಿಯಲ್ಲಿ ಹಲವರು ತಾವು ಹೊತ್ತೊಯ್ದ ಸಾಮಗ್ರಿಗಳನ್ನು ಹಿಂತಿರುಗಿಸಿದರು.
ಗ್ರಾಮಸ್ಥರು ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (ಇನ್ಸ್ಟಾಗ್ರಾಂ) ಹರಿದಾಡುತ್ತಿದೆ. ಪೊಲೀಸರು ಸಂಗ್ರಹಿಸಿದ ಸರಂಜಾಮುಗಳನ್ನು ಲಾರಿಯವರಿಗೆ ಹಿಂತಿರುಗಿಸಿದರು.
BT Theft of daily necessities near Mallenahalli village
Leave a comment