ಚಿಕ್ಕಮಗಳೂರು: ಕಡೂರು ತಾಲ್ಲೂಕು ದೇವನೂರಿನ ಸರ್ಕಾರಿ ಶಾಲೆಯಲ್ಲಿ ೧೨೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ೫೦ ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ೪ ಶಾಲಾ ಕೊಠಡಿ, ಪ್ರತ್ಯೇಕ ಶೌಚಾಲಯ ನಿರ್ಮಾಣದ ಜೊತೆಗೆ ಅಗತ್ಯ ಮೂಲ ಸೌಕರ್ಯ ಓದಗಿಸಿ ಬರುವ ಜೂನ್ ೨೧ ರಂದು ಲೋಕಾರ್ಪಣೆ ಮಾಡುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ದೇವನೂರಿನಲ್ಲಿ ತಾಪಂ ಕಡೂರು, ಗ್ರಾಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೀರೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ಧಲಿ ಪೂಜೆ ನೆರೆವೇರಿಸಿ ಮಾತನಾಡಿದರು.
ದೇವನೂರು ಈ ಭಾಗದ ಶಕ್ತಿ ಕೇಂದ್ರವಾಗಿದ್ದು ಹಲವಾರು ದೇವಾಲಯಗಳು, ಪುರಾತನ ಪುಣ್ಯ ಕ್ಷೇತ್ರಗಳಿವೆ, ಜೊತೆಗೆ ರೈತರ ಜೀವನಾಡಿಯಾಗಿರುವ ದೊಡ್ಡ ಕೆರೆಯು ಇದೆ ಎಂದು ಹೇಳಿದ ಅವರು ನನ್ನ ಜನ್ಮ ದಿನದಂದು ಕಳೆದ ವರ್ಷ ನಾನು ವ್ಯಾಸಂಗ ಮಾಡಿದ ಹಿರೇಮಗಳೂರಿನ ಶಾಲೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣ ಮಾಡಿ ಉದ್ಘಾಟಿಸಿದ್ದೇನೆ ಎಂದರು.
ಅದೇ ರೀತಿ ದೇವನೂರು ಶಾಲೆಯ ನೂತನ ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿ ಈ ಭಾರಿಯ ಹುಟ್ಟುಹಬ್ಬಕ್ಕೆ ಈ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ವಿದ್ಯಾರ್ಥಿಗಳಿಗೆ ಸಮರ್ಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ, ಕಾಯಕಯೋಗಿ ಸಿದ್ಧರಾಮೇಶ್ವರ ರವರು ೧೫ನೇ ಶತಮಾನದ ಕನಕದಾಸರು, ವಾಲ್ಮೀಕಿ, ೧೯ನೇ ಶತಮಾನದಲ್ಲಿ ಅಂಬೇಡ್ಕರ್ ಮತ್ತಿತರರು ಸಮ-ಸಮಾಜ ಪರಿಕಲ್ಪನೆಯನ್ನು ಗುರಿಯಾಗಿಟ್ಟುಕೊಂಡು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಸಂವಿಧಾನದ ಆಶಯದಂತೆ ಸರ್ವರೂ ಸುಶಿಕ್ಷಿತರಾಗಬೇಕೆಂದು ಡಾ. ಬಿ.ಆರ್ ಅಂಬೇಡ್ಕರ್ ನಿರ್ಧರಿಸಿ ಶಿಕ್ಷಣ, ಆರೋಗ್ಯ, ಸ್ತ್ರೀ ಸಮಾನತೆಯನ್ನು ನೀಡಿದ್ದಾರೆ, ಈ ನಿಟ್ಟಿನಲ್ಲಿ ಸರ್ಕಾರ ಆಧುನಿಕ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲು ಮುಂದಾಗಿದೆ ಎಂದರು,
ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ಇವುಗಳನ್ನು ಅಳವಡಿಸಿಕೊಂಡಾಗ ದೇಶ ಶಾಂತಿ ನೆಮ್ಮದಿಯನ್ನು ಕಾಣುತ್ತದೆ, ಭಾರತ ದೇಶದಲ್ಲಿ ಉತ್ತಮ ಸಂಸ್ಕಾರ, ಉತ್ತಮ ಶಿಕ್ಷಣದ ಪರವಾಗಿ ಯುದ್ಧಗಳು ನೆಡೆಯುತ್ತಿಲ್ಲ ಎಂದು ಹೇಳಿದರು.
ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಚೌಕಿದಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕ ಹೆಚ್.ಡಿ ತಮ್ಮಯ್ಯನವರು ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿ ವಿಶೇಷ ಒತ್ತು ನೀಡುತ್ತಿದ್ದಾರೆ, ಜೊತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಇವರಿಗೆ ಇಲಾಖೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ಗ್ರಾಪಂ ಅಧ್ಯಕ್ಷೆ ದೀಪಾ ದಕ್ಷಿಣ ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಬಸವರಾಜ್, ಕುಮಾರ, ಗ್ರಾಮಸ್ಥರಾ ಆನಂದ್, ಮೋಹನ್ ನಾಯ್ಕ, ಸಂಜಯ್, ಅಶೋಕ್, ಸಂತೋಷ್, ಶಶಿಕಲಾ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಶಿಕ್ಷಕಿ ಪ್ರೇಮಕುಮಾರಿ ಸ್ವಾಗತಿಸಿದರು.
Devanur Government School’s new building to be inaugurated in June
Leave a comment