ಚಿಕ್ಕಮಗಳೂರು: ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡುವಂತೆ ಅಗ್ರಹಿಸುವುದೂ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಪರಿಹರಿಸುವಂತೆ ಒತ್ತಾಯಿಸಲು ಜನವರಿ ಕೊನೆಯ ವಾರದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರತಿಭಟನಾ ಸಮಾವೇಶವನ್ನು ರಾಜ್ಯಸಮಿತಿಯ ಸಲಹೆ ಮೇರೆಗೆ ಕೈಗೊಳ್ಳಲಾಗಿದೆ. ಬಗರ್ ಹುಕ್ಕುಂ ಸಾಗುವಳಿ ಫಾರಂ ನಂ.೫೦, ೫೩, ೫೭ ಅರ್ಜಿಗಳ ಶೀಘ್ರ ವಿಲೇವಾರಿ ಪರಿಭಾವಿತ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಕಂದಾಯ ಭೂಮಿ ಗುರ್ತಿಸಿ ಭೂರಹಿತರಿಗೆ ಹಂಚಬೇಕು ಎಂದರು.
ಬಯಲು ಭಾಗದ ಕೆರೆಗಳಿಗೆ ಭದ್ರಾ ಉಪಕಣಿವೆ ನೀರಾವರಿ ಯೋಜನೆಯಿಂದ ನೀರು ಹರಿಸುವ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು, ಫಸಲು ಭೀಮಾ ಯೋಜನೆಯಡಿ ರೈತರಿಗೆ ಯಾವುದೇ ಪ್ರಯೋಜನವಾಗದಿದ್ದರೂ ವಿಮಾ ಕಂಪನಿಗಳ ಜೇಬು ತುಂಬಿಸುತ್ತಿರುವ ಯೋಜನೆಯನ್ನು ಕೈಬಿಡಬೇಕು. ಕೂಡಲೇ ಸರ್ಕಾರ ರೈತ ಪರವಾದ ನಿಯಮಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಇತ್ತೀಚೆಗೆ ಸಂಘಟನೆಯಲ್ಲಿ ನಡೆದ ಅಹಿತಕರ ಘಟನೆಗಳನ್ನು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರು, ಪದಾಧಿಕಾರಿಗಳೊಂದಿಗೆ ಚರ್ಚಿಸಿ ಸಂಘಟನೆಯ ಆಂತರಿಕ ವಿಚಾರಗಳನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ ಎಂದರು.
ಸಂಘ ವಿರೋಧಿ ಚಟುವಟಿಕೆ ಪುನರಾವರ್ತನೆಯಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು, ಈಗ ಆಗಿರುವ ಅಹಿತಕರ ಘಟನೆಗಳನ್ನು ಕೈಬಿಟ್ಟು, ಸಂಘಟನೆ ಬಲಗೊಳಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ತಿಳಿಸಿದ್ದಾರೆಂದರು.
ಬೇಕಾ ಬಿಟ್ಟಿ ಸದಸ್ಯತ್ವ ಮಾಡಬಾರದು, ರೈತ ಸಂಘದ ವಿಚಾರಗಳಿಗೆ ವಿರುದ್ಧವಾದವರನ್ನು ಸಂಘಟನೆ ಪ್ರವೇಶಿಸಲು ಅವಕಾಶ ನೀಡಬಾರದು, ತಾಲ್ಲೂಕು ಸಮಿತಿಗೆ ಜಿಲ್ಲಾ ಸಮಿತಿ ಸೂಕ್ತ ಸಲಹೆ ಸಹಕಾರ ನೀಡಬೇಕು. ಜಿಲ್ಲಾ ಪದಾಧಿಕಾರಿಗಳಿಲ್ಲದೆ ತಾಲ್ಲೂಕು ಸಮಿತಿ ಯಾವುದೇ ಪ್ರಮುಖ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ವೈ.ಸಿ ಸುನಿಲ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಚಂದ್ರಶೇಖರ್, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಬಸವರಾಜು, ಹಿರಿಯ ಮುಖಂಡ ಕೆ.ಕೆ. ಕೃಷ್ಣೇಗೌಡ, ತಾಲ್ಲೂಕು ಉಪಾಧ್ಯಕ್ಷ ಬಿ.ಯು ಪರ್ವತೇಗೌಡ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಪಸ್ಥಿತರಿದ್ದರು.
Protest rally to draw government’s attention to burning issues in the district
Leave a comment