ಚಿಕ್ಕಮಗಳೂರು: ರೈತರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶವೇ ‘ರೈತ ದಿನಾಚರಣೆ’ ಎಂದು ರೈತ ಸಂಘದ ಹೋಬಳಿ ಘಟಕ ಗ್ರಾಮ ಶಾಖೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವರಾಜೇಗೌಡ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ದೇಬೋರನಹಳ್ಳಿ ರೈತ ಸಂಘದ ಶಾಖೆ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಡಿ.೨೨ ರಂದು ಸೋಮವಾರ ಬೆಳಗ್ಗೆ ೧೦ ಗಂಟೆಗೆ ರೈತ ದಿನಾಚರಣೆಯನ್ನು ಉದ್ದೇಬೋರನಹಳ್ಳಿಯಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂಬಂಧ ನೈಸರ್ಗಿಕ ಕೃಷಿ ಕುರಿತು ಚಂದ್ರಶೇಖರ್ ನಾರಾಣಾಪುರ ಉಪನ್ಯಾಸ ನೀಡಲಿದ್ದಾರೆ. ಸಿರಿಧಾನ್ಯ ಮತ್ತು ಬಳಕೆ ಬಗ್ಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಾಹಿತಿ ನೀಡಲಿರುವರು, ತೋಟಗಾರಿಕೆ ಕೃಷಿ ಬಗ್ಗೆ ತೋಟಗಾರಿಕಾ ಇಲಾಖೆ ಅಧಿಕಾರಿ ವಿವರಣೆ ನೀಡಲಿದ್ದಾರೆಂದು ಹೇಳಿದರು.
ಈ ರೈತ ದಿನಾಚರಣೆಯ ಅಂಗವಾಗಿ ಬಿಳೇಕಲ್ಲಳ್ಳಿಯಿಂದ ಉದ್ದೇಬೋರನಹಳ್ಳಿವರೆಗೆ ಜಾನಪದ ಕಲಾ ಮೇಳಗಳು ಹಾಗೂ ಜೋಡೆತ್ತಿನ ಗಾಡಿ ಮೆರವಣಿಗೆ ಮತ್ತು ಬೃಹತ್ ರೈತರ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ನಿರ್ಧರಿಸಲಾಗಿದೆ ಎಂದ ಅವರು, ಕೃಷಿ, ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಭಾಗದ ಸುತ್ತಮುತ್ತಲ ಗ್ರಾಮಗಳ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸುದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ, ಗೌರವಾಧ್ಯಕ್ಷ ಬಸವರಾಜು, ಹೋಬಳಿ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಕಾರ್ಯದರ್ಶಿ ಪ್ರಕಾಶ್, ಮುಖಂಡ ಬಸವರಾಜು ಉಪಸ್ಥಿತರಿದ್ದರು.
‘Farmers’ Day’ to be celebrated in Uddeboranahalli on December 22
Leave a comment