ಚಿಕ್ಕಮಗಳೂರು: ‘500 ವರ್ಷಗಳ ಹಿಂದೆ ಕನಕದಾಸರ ಕೀರ್ತನೆಗಳು ಎಷ್ಟು ಪ್ರಸ್ತುತವಾಗಿದ್ದವೋ ಈಗಲೂ ಅಷ್ಟೇ ಪ್ರಸ್ತುತವಾಗಿವೆ’ ಎಂದು ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.
ತಾಲ್ಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಕನಕದಾಸರು, ಬಿ.ಆರ್.ಅಂಬೇಡ್ಕರ್ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗಳ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿದ್ದ ಮಹಿಳೆಯನ್ನು ಜಾತಿ ಕಾರಣದಿಂದ ಸಮುದಾಯ ಭವನದ ಒಳಗೆ ಬಿಟ್ಟುಕೊಳ್ಳಲು ಹಿಂಜರಿಯುತ್ತಿರುವ ಪ್ರವೃತ್ತಿ ಇನ್ನೂ ಉಳಿದಿದೆ. ಆದ್ದರಿಂದ ಕನಕರ ಕೀರ್ತನೆಗಳು ಈಗಲೂ ಪ್ರಸ್ತುತ ಎಂಬುದು ಗೊತ್ತಾಗುತ್ತದೆ ಎಂದರು.
‘ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಆಗಿನ ಸಮಾಜದ ಅಂಕು ಡೊಂಕನ್ನು ಅವರು ತಿಳಿಸಿಕೊಟ್ಟಿದ್ದರು. ಆದರೆ, ಈಗ ನಾವು ಕಾನೂನಿನ ಮೂಲಕ ಜಾತಿ ವ್ಯವಸ್ಥೆ ತಿದ್ದಲು ಮುಂದಾಗುತ್ತಿದ್ದೇವೆ. ಅಂಬೇಡ್ಕರ್ ಅವರು ಸಂವಿಧಾನ ನೀಡದಿದ್ದರೆ ಇಷ್ಟೊಂದು ಬದಲಾವಣೆ ಆಗುತ್ತಿರಲಿಲ್ಲ. ಇನ್ನೂ ಮನಃಸ್ಥಿತಿ ಬದಲಾಗಬೇಕು. ಅಂಬೇಡ್ಕರ್ ಕರೆ ನೀಡಿರುವಂತೆ ವಿದ್ಯೆ, ಸಂಘಟನೆ ಮತ್ತು ಹೋರಾಟದಿಂದ ಅದು ಸಾಧ್ಯ’ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಮಾತನಾಡಿ, ‘ಪ್ರತಿಮೆಗಳನ್ನು ಇಟ್ಟುಕೊಂಡು ಹೊಡೆದಾಡಿಸಿದವರಿಗೆ, ಭಾಷೆಯ ಜಗಳ ಹುಟ್ಟು ಹಾಕಿದವರಿಗೆ, ರಾಜ್ಯ ರಾಜ್ಯಗಳ ನಡುವೆ ಸಂಘರ್ಷ ಹುಟ್ಟು ಹಾಕಿದ ಜನರಿಗೆ ಸಾದರಹಳ್ಳಿ ಗ್ರಾಮದಲ್ಲಿ ಮೂರೂ ಪ್ರತಿಮೆಗಳ ಅನಾವರಣದ ಮೂಲಕ ಪ್ರೀತಿ, ಭಾವೈಕ್ಯದ ಸಂದೇಶ ಹೋಗಬೇಕು’ ಎಂದರು.
ಬಿಎಂಟಿಸಿ ಉಪಾಧ್ಯಕ್ಷ ನಿಖಿತ್ರಾಜ್ ಮೌರ್ಯ, ‘ಅಂಬೇಡ್ಕರ್, ಬಸವಣ್ಣ, ಕನಕದಾಸ, ರಾಯಣ್ಣ, ಕುವೆಂಪು ನಮಗೆ ಬೇರೆ ವ್ಯಕ್ತಿಗಳಂತೆ ಕಂಡರೂ ಅವರೆಲ್ಲರ ಚಿಂತನೆ ಮತ್ತು ವಿಚಾರಧಾರೆ ಒಂದೇ’ ಎಂದು ಹೇಳಿದರು.
ಆದರ್ಶ ಇಟ್ಟುಕೊಂಡು ಬದುಕಿದರು. ಕನಕದಾಸರಿಗೆ ರಾಜಾಶ್ರಯ ಇಲ್ಲದಿದ್ದರೂ, ಅವರು ಬರೆದಿರುವ ಸಾಹಿತ್ಯ ಮತ್ತು ಕೀರ್ತನೆಗಳು ಉಳಿದಿವೆ. ಇದಕ್ಕೆ ಕಾರಣ ಇತರೆ ಹಿಂದುಳಿದ ಜನ ಬಾಯಿಂದ ಬಾಯಿಗೆ ಹರಡಿಸಿದ್ದಾರೆ ಎಂದು ಹೇಳಿದರು.
ಒಂದೇ ವೇದಿಕೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಳ್ಳುವ ಪರಿಸ್ಥಿತಿ 75 ವರ್ಷಗಳ ಹಿಂದೆ ಇರಲಿಲ್ಲ. 4 ಸಾವಿರ ವರ್ಷಗಳಿಂದ ಭಾರತದಲ್ಲಿ ಈ ವ್ಯವಸ್ಥೆ ಇತ್ತು. ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಸಮಾನತೆ ಬಂದಿದೆ. ತಳ ಸಮುದಾಯದವರೂ ಶಿಕ್ಷಣ ಮತ್ತು ಉನ್ನತ ಹುದ್ದೆಗಳ ಬಗ್ಗೆ ಮಾತನಾಡುವಂತೆ ಸಂವಿಧಾನ ಮಾಡಿದೆ ಎಂದು ಹೇಳಿದರು.
ಶಾಸಕ ಜಿ.ಎಚ್. ಶ್ರೀನಿವಾಸ್, ಬಿಎಸ್ಪಿ ಮುಖಂಡ ಕೆ.ಟಿ. ರಾಧಾಕೃಷ್ಣ, ಉದ್ಯಮಿ ಎಸ್.ಎನ್. ರಮೇಶ್, ಮುಖಂಡರಾದ ರೇಖಾ ಹುಲಿಯಪ್ಪಗೌಡ, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ರಾಜು ಮಣೇನಹಳ್ಳಿ, ಕೆಂಗೇಗೌಡ, ಎಸ್.ಬಿ. ಮಲ್ಲೇಗೌಡ, ಮಂಜುಳಾ, ವಿಶಾಲಾಕ್ಷಿ, ರೇಣುಕಾ, ಬೀರೇಗೌಡ ಭಾಗವಹಿಸಿದ್ದರು.
Kanakadasa’s hymns are still as relevant today
Leave a comment