ಮೂಡಿಗೆರೆ: ಬಣಕಲ್ ಬಾಲಿಕಾ ಮರಿಯಾ ದೇವಾಲಯ ಹಾಗೂ ಕ್ರೈಸ್ತರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಸಿ, ರಸ್ತೆ ಬದಿ ಬಿದ್ದಿದ್ದ ಕಸ ತೆರವುಗೊಳಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧರ್ಮಗುರು ಲಾರೆನ್ಸ್ ಪ್ರೇಮ್ ಡಿಸೋಜ ಮಾತನಾಡಿ, ‘ಪ್ರಕೃತಿ ಇದ್ದರೆ ಮಾತ್ರ ಜೀವಿಗಳು ಉಳಿಯಲು ಸಾಧ್ಯ. ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದರು.
ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ಪೆಡ್ಡಿ ಲೋಬೊ ಮಾತನಾಡಿ, ‘ರಸ್ತೆ ಬದಿ ಕಸ ಎಸೆಯುವ ಪ್ರವೃತ್ತಿಯನ್ನು ಕೈ ಬಿಡಬೇಕು. ಸಾರ್ವಜನಿಕ ಆಸ್ತಿಗಳ ರಕ್ಷಣೆ ಮಾಡುವ ಕೆಲಸವಾಗಬೇಕು. ಚಾರ್ಮಾಡಿ ಘಾಟಿಯಲ್ಲಿ ವರ್ಷದಲ್ಲಿ ನಾಲ್ಕೈದು ಬಾರಿ ಕಸ ತೆರವುಗೊಳಿಸಿ ದರೂ ಮತ್ತೆ ಮತ್ತೆ ಸಂಗ್ರಹವಾಗುತ್ತಿರುವುದು ಪ್ರಜ್ಞಾವಂತರೇ ಕಸ ಎಸೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದರು.
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೇಲ್ವಿನ್ ಲಸ್ರಾದೊ ಮಾತನಾಡಿ, ರಸ್ತೆ ಬದಿ ಎಸೆಯುವ ಕಸವು ಪ್ರಕೃತಿಯ ಮಡಿಲು ಸೇರುತ್ತದೆ. ಮಳೆಗಾಲದಲ್ಲಿ ಕಸದಲ್ಲಿದ್ದ ಮಲಿನಕಾರಿ ವಸ್ತುಗಳು ನೀರಿನಲ್ಲಿ ಸೇರುವುದರಿಂದ ಜಲಚರಗಳಿಗೂ ಹಾನಿಯಾಗುತ್ತದೆ. ಎಲ್ಲ ಕಾರ್ಯಗಳ ನಿರ್ವಹಣೆಯು ಸರ್ಕಾರದ ಹೊಣೆ ಎಂದು ಭಾವಿಸದೇ ಸಂಘ–ಸಂಸ್ಥೆಗಳು ಸೇವಾ ಕಾರ್ಯದಲ್ಲಿ ತೊಡಗಿದರೆ ಉತ್ತಮ ಪರಿಸರ ನಿರ್ಮಿಸಬಹುದು ಎಂದರು.
ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ನಜರೆತ್ ಶಾಲೆಯ ಶಿಕ್ಷಕರು, ಚರ್ಚ್ನ ಭಕ್ತರು ಭಾಗವಹಿಸಿದ್ದರು.
Cleanliness campaign at Charmadi Ghat
Leave a comment