ತರೀಕೆರೆ: ಗ್ರಾಮೀಣ ಕ್ರೀಡೆ ಕುಸ್ತಿಯಿಂದ ಯುವ ಜನರಿಗೆ ಸದೃಢ ದೇಹ, ಆರೋಗ್ಯ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದು ಪಟ್ಟಣದ ಕೀಲು ಮತ್ತು ಮೂಳೆ ತಜ್ಞ ಡಾ.ದೇವರಾಜ್ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಶ್ರೀಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ ತರೀಕೆರೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ 100ನೇ ವರ್ಷದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಮೊದಲನೇ ಕುಸ್ತಿ ಜೋಡಣೆ ನೆರವೇರಿಸಿ ಅವರು ಮಾತನಾಡಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು. ಆಯೋಜಕರು ಮತ್ತು ಸರ್ಕಾರವನ್ನು ಗೌರವಿಸಬೇಕು ಎಂದರು.
ಶ್ರೀಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಸ್. ರಮೇಶ್ (ಬೈಟು) ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ತರೀಕೆರೆಯನ್ನು ಆಳಿದ ಪಾಳೆಗಾರರು ಈ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದ್ದರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ನಮ್ಮ ಸಮಾಜಕ್ಕೆ ವಹಿಸಿದ್ದು, ಅಂದಿನಿಂದಲೂ ಈ ಕ್ರೀಡೆಗೆ ಮತ್ತು ಹೊರಗಿನಿಂದ ಬರುವ ಕ್ರೀಡಾಪಟುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ‘ಕುಸ್ತಿ ಶೌರ್ಯದ ಸಂಕೇತ. ಇದನ್ನು ಪಾಳೆಗಾರರ ನಂತರ ಎಲ್ಲಾ ಸಮಾಜದವರ ಸಹಕಾರದಿಂದ ಕುರುಬ ಸಮುದಾಯ ನಡೆಸಿಕೊಂಡು ಬರುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ವಸಂತಕುಮಾರ್, ಪಾಳೇಗಾರರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಕ್ರೀಡೆಯನ್ನು ಪ್ರತಿಯೊಬ್ಬರೂ ಯಶಸ್ವಿಗೊಳಿಸಬೇಕು ಎಂದರು.
ಪುರಸಭಾ ಸದಸ್ಯ ಟಿ.ಜಿ.ಲೋಕೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುಸ್ತಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ಸೊಬಗನ್ನು ನಮ್ಮವರು ಉಳಿಸಿಕೊಂಡು ಬರುತ್ತಿದ್ದಾರೆ. ರಾಜ್ಯಮಟ್ಟದ ಈ ಕ್ರೀಡೆಗೆ ಕ್ರೀಡಾಂಗಣ, ಊಟ, ವಸತಿ, ಬಹುಮಾನಗಳು ಮತ್ತು ಇನ್ನಿತರೆ ವ್ಯವಸ್ಥೆಗಳನ್ನು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ವಹಿಸಿಕೊಂಡು, ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಕ್ರೀಡೆ ಪ್ರತಿವರ್ಷ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಪುರಸಭಾ ಉಪಾಧ್ಯಕ್ಷೆ ಪಾರ್ವತಮ್ಮ, ಸಮಿತಿಯ ಗೌರವ ಅಧ್ಯಕ್ಷ ವಗ್ಗಪ್ಪರ ಮಂಜಣ್ಣ, ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಟು ಅನುಷಾ ಗಂಗಾಧರ್ ಮಾತನಾಡಿದರು.
ಅಖಾಡದ ಉದ್ಘಾಟನೆಯನ್ನು ತರೀಕೆರೆ ವಲಯ ಅರಣ್ಯ ವಲಯಾಧಿಕಾರಿ ಆಶೀಫ್ ಅಹಮದ್ ನೆರವೇರಿಸಿದರು. ಕುಸ್ತಿ ಸಂಘದ ನಿಕಟಪೂರ್ವ ಅಧ್ಯಕ್ಷ ಜಯಸ್ವಾಮಿ ಕಾರೆ, ದರ್ಶನ್, ರೇವಣ್ಣ, ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಟಿ.ಡಿ.ರವಿಕುಮಾರ್ ಸ್ವಾಗತಿಸಿದರು. ಸುಜೀತ್ ಗುರುದೇವ್ ಪ್ರಾರ್ಥಿಸಿದರು. ನಿವೃತ್ತ ಬಿಇಒ ಸೋಮಶೇಖರಯ್ಯ ನಿರೂಪಿಸಿ ವಂದಿಸಿದರು.
Dasara open-air wrestling competition kicks off
Leave a comment