Home namma chikmagalur ಜಾತೀಯತೆಯ ವಿರುದ್ಧ ಜನರ ಹೃದಯದಲ್ಲಿ ಜ್ಞಾನದ ಹಣತೆ ಹಚ್ಚಿದರು
namma chikmagalurchikamagalurHomeLatest News

ಜಾತೀಯತೆಯ ವಿರುದ್ಧ ಜನರ ಹೃದಯದಲ್ಲಿ ಜ್ಞಾನದ ಹಣತೆ ಹಚ್ಚಿದರು

Share
Share

ಚಿಕ್ಕಮಗಳೂರು:  ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತೀಯತೆಯ ವಿರುದ್ಧ ಖಡ್ಗವನ್ನು ಹಿಡಿಯಲಿಲ್ಲ. ಬದಲಾಗಿ ಜನರ ಹೃದಯದಲ್ಲಿ ಜ್ಞಾನದ ಹಣತೆಯನ್ನು ಹಚ್ಚಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರತಿಯೊಂದು ವಸ್ತುಗಳು ಪಂಚಭೂತಗಳಿಂದಾಗಿವೆ. ಮನುಷ್ಯ ದೇವರ ಸೃಷ್ಟಿಯಾಗಿದ್ದು, ದೇವರು ಜಾತಿಯನ್ನು ಸೃಷ್ಟಿಸಲಿಲ್ಲ. ಜನ್ಮದಿಂದ ಬ್ರಾಹ್ಮಣನಾಗಿದ್ದರೂ ಗುಣಗ್ರಾಹಿಯಾಗಿರದಿದ್ದರೆ ಆತ ಶೂದ್ರನೇ ಆಗುತ್ತಾನೆ. ಶೂದ್ರನಾಗಿದ್ದು, ವಿದ್ವತ್ತನ್ನು ಗಳಿಸಿದ್ದರೆ ಆತ ಶ್ರೇಷ್ಠ ವಿದ್ವಾಂಸನಾಗುತ್ತಾನೆ ಎಂದು ಹೇಳಿದರು.

ನಾರಾಯಣ ಗುರುಗಳು ಕೆಳಜಾತಿಯಲ್ಲಿ ಹುಟ್ಟಿದ್ದರೂ ಸಂಸ್ಕೃತ, ಮಲಯಾಳಂ, ತಮಿಳು ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಿ ಬ್ರಹ್ಮಶ್ರೀಗಳಾದರು. ಯಾವುದೇ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಹಾಗೆ ಸೀಮಿತಗೊಳಿಸಿದರೆ ಆ ಜಾತಿಗೆ ಅಪಚಾರ ಮಾಡಿದಂತಾಗುತ್ತದೆ. ದೇವರನಾಡು ಎಂದೇ ಹೆಸರಾದ ಕೇರಳದಲ್ಲಿ ಮತಾಂತರ ಮಾಯಾಜಾಲವಾಗಿ ಹಬ್ಬಿಕೊಂಡಿದ್ದ ಸಂದರ್ಭದಲ್ಲಿ ಕೆಳ ವರ್ಗದವರು ಮತಾಂತರಗೊಳ್ಳದಂತೆ ಪಾರು ಮಾಡಿದವರೇ ನಾರಾಯಣ ಗುರುಗಳು ಎಂದು ತಿಳಿಸಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ಸಂಸ್ಕಾರವಂತ ದೇಶ ನಮ್ಮದು. ಶೋಷಿತ ಸಮಾಜದ ಗುರುಗಳು ಬುದ್ಧ, ಬಸವ, ಅಂಬೇಡ್ಕರರಂತೆ ವಿಶ್ವ ಕ್ರಾಂತಿ ಮಾಡಿದರು. ವಿವಿಧತೆಯಲ್ಲಿ ಏಕತೆ ಇರುವ, ಸಂಸ್ಕಾರವಿರುವ ದೇಶವೆಂದರೆ ಅದು ಭಾರತ. ಒಟ್ಟು ಕುಟುಂಬದಲ್ಲಿ ಒಗ್ಗಟ್ಟು, ಸಾಮರಸ್ಯವಿರುತ್ತದೆ ಎಂದು ಕೂಡು ಕುಟುಂಬದ ಬಗ್ಗೆ ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಮಹನೀಯರ ಜೀವನ, ಸಾಧನೆ ಮೆಲುಕು ಹಾಕುವುದರ ಮೂಲಕ ನಮ್ಮ ಬದುಕನ್ನು ಉನ್ನತೀಕರಿಸಿಕೊಳ್ಳುವುದೇ ಆಗಿದೆ. ಭರತ ಭೂಮಿಯಲ್ಲಿ ಸಮಾಜದ ಅನಿಷ್ಠ, ಅಂಟು ಜಾಢ್ಯಗಳಾದ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ, ಸಾಮಾಜಿಕ ಅನ್ಯಾಯ ತುರಿಯಾವಸ್ಥೆಯಲ್ಲಿದ್ದಾಗ ಬಸವ, ಬುದ್ಧ, ಅಂಬೇಡ್ಕರ್ ಅವುಗಳನ್ನು ನಿವಾರಿಸಲು ಶ್ರಮಿಸಿದರು. ಅದೇ ಸಾಲಿನಲ್ಲಿ ನಿಲ್ಲುವವರು ನಾರಾಯಣ ಗುರುಗಳು ಎಂದು ಹೇಳಿದರು.

ಬ್ರಹ್ಮಶ್ರೀ ಎಂದರೆ ಬ್ರಹ್ಮಜ್ಞಾನವನ್ನು ಪಡೆದವರು ಎಂದು ಅರ್ಥ. ಯಾವಾಗ ಜಗತ್ತಿನಲ್ಲಿ ಅಧರ್ಮ, ಅಶಾಂತಿ ತಾಂಡವವಾಡುತ್ತೊ ಆಗ ಜಗತ್ತನ್ನು ಉದ್ಧರಿಸಲು ಮಹಾತ್ಮರು ಜನಿಸುತ್ತಾರೆ. ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಉತ್ಪತ್ತಿಯಾದ ಜಾತೀಯತೆಯ ಕಸವನ್ನು ಗುಡಿಸುವ ಕೆಲಸ ಮಾಡಿದರು. ವಿಧವೆಯ ಕಣ್ಣೀರನ್ನು ಒರೆಸದ, ಹಸಿದವರಿಗೆ ಅನ್ನವನ್ನು ನೀಡದ ಧರ್ಮ ಧರ್ಮವಲ್ಲ, ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಪ್ರತಿಪಾದಿಸಿ ಶೋಷಿತ ವರ್ಗದವರಿಗೂ ದೇವರಿದ್ದಾನೆ ಎಂದು ತೋರಿಸಿಕೊಡುವ ಮೂಲಕ ಅನೇಕ ದೇವಾಲಯಗಳನ್ನು ನಿರ್ಮಿಸಿದರು.

ಶಂಕರಾಚಾರ್ಯರ ಅದ್ವೈತ ಸಿದ್ಧಾಂತವನ್ನು ಅನುಸರಿಸಿ ಅದ್ವೈತ ಗುರು ಎಂದೆನಿಸಿದ್ದಾರೆ. ಯೋಗದಲ್ಲಿ ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲೂ ಏಸುವಿನಂತಿದ್ದವರು ನಾರಾಯಣ ಗುರುಗಳು ಎಂದು ಹೇಳಿದರು.

ಶ್ರೀ ನಾರಾಯಣ ಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್, ಜಿಲ್ಲಾ ಬಿಲ್ಲವ ಸಂಘದ ಮಹಿಳಾ ಅಧ್ಯಕ್ಷರಾದ ಪ್ರಮಿಳಾ ವಿಜಯ, ಜಿಲ್ಲಾ ನಾರಾಯಣ ಗುರು ಸಮಿತಿ ಮಹಿಳಾ ಅಧ್ಯಕ್ಷೆ ಶಶಿಕಲಾ ಅಶೋಕ್, ಕೆ.ಸಿ.ಶಾಂತಕುಮಾರ್, ವಾಸು ಪೂಜಾರಿ, ರಾಜಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

He instilled the spirit of knowledge in the hearts of the people against casteism.

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...