ಚಿಕ್ಕಮಗಳೂರು: ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ಗುರಿ ಇರಿಸಿಕೊಂಡು ಜಿಲ್ಲೆಯಲ್ಲಿ ಭದ್ರ ಬಾಲ್ಯ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ ಇಲಾಖೆಗಳು ಒಳಗೊಂಡು ಕಾರ್ಯ ನಿರ್ವಹಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ತಿಳಿಸಿದರು.
ನಗರದ ಜಿ.ಪಂ.ನ ಮಿನಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳನ್ನು ಒಳಗೊಂಡು ಮಕ್ಕಳ ಕೇಂದ್ರಿತ ಯೋಜನೆಗಳನ್ನು ರೂಪಿಸಲಾಗಿದೆ. ಮಕ್ಕಳೇ ಮುಂದಿನ ಭವಿಷ್ಯವಾಗಿರುವುದರಿಂದ ಶಾಲಾ ಹಂತದಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಾಲಾ ಹಂತದಲ್ಲಿ ಮಕ್ಕಳೇ ನೇರವಾಗಿ ಪಾಲ್ಗೊಳ್ಳುವುದು ಇಲ್ಲವೆ ಮೂಲ ಸೌಕರ್ಯಗಳನ್ನು ಒದಗಿಸುವುದು. ನಾವು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ವ್ಯವಸ್ಥೆ ಯಾವ ರೀತಿ ಇರಬೇಕೆನ್ನುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿಯಲ್ಲಿರುವ ನಿಧಿಯಿಂದ ಆ ಶಾಲೆಯ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ ಎಂದರು.
ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿದರೆ ಅಂತಹ ಮಕ್ಕಳು ಬಾಲ್ಯ ವಿವಾಹಕ್ಕೆ ಒಳಪಡಬಹುದು ಅಥವಾ ಬಾಲ ಗರ್ಭಿಣಿಯರಾಗುವ ಸಂಭವ ಹೆಚ್ಚು; ಮಕ್ಕಳ ಬಗ್ಗೆ ಪೋಷಕರ ಗಮನ ಕಡಿಮೆಯಾದರೆ ಮಕ್ಕಳು ಬಾಲ್ಯದಲ್ಲೇ ಗರ್ಭಿಣಿಯರಾಗುವಂತಹ ಪ್ರಕರಣಗಳು ಹೆಚ್ಚುವ ಸಂಭವವಿದೆ. ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿದರೆ ಅದರಿಂದಾಗುವ ಪ್ರಯೋಜನದ ಬಗ್ಗೆ ಪೋಷಕರಲ್ಲೇ ಸ್ಪಷ್ಟತೆ ಇಲ್ಲದ ಕಾರಣ ಈ ಸಮಸ್ಯೆ ಕಾಡುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮ ಫಲಿತಾಂಶ ಬಾರದೇ ಇದ್ದಲ್ಲಿ ನಾವು ಶಿಕ್ಷಣ ಇಲಾಖೆಯನ್ನು ಹೊಣೆ ಮಾಡುತ್ತೇವೆ. ೮ ಮತ್ತು ೯ನೇ ತರಗತಿಯಲ್ಲಿ ಶಾಲೆಗಳಲ್ಲಿ ಮಕ್ಕಳನ್ನು ಸಾಕಷ್ಟು ರೀತಿಯಲ್ಲಿ ಉತ್ತೇಜಿಸುತ್ತಾರೆ. ಆದರೆ ಶಿಕ್ಷಣದಲ್ಲಿ ಹೆಚ್ಚು ಪ್ರಗತಿ ತೋರಿಸುತ್ತಿಲ್ಲ ಎನ್ನುವುದು ಸ್ಪಷ್ಟವಾದ ಬಳಿಕ ಔದಾರ್ಯ ತೋರಿ ಅನುತ್ತೀರ್ಣರಾಗುವ ಮಕ್ಕಳು ಶಾಲೆಯಿಂದ ಹೊರಗುಳಿದರೆ ಒಳ್ಳೆಯದು. ಹಾಗಾದಾಗ ತಮ್ಮ ಶಾಲೆಗೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಲಭಿಸುತ್ತದೆ ಎನ್ನುವುದು ಶಿಕ್ಷಣ ಇಲಾಖೆಯಲ್ಲಿ ಕಂಡು ಬರುತ್ತಿದೆ. ಬಾಲ್ಯವಿವಾಹವನ್ನು ಬೆಳಕಿಗೆ ತರುವವರು ಅಂಗನವಾಡಿ ಮೇಲ್ವಿಚಾರಕರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದಲ್ಲಿ ಆ ಅಂಗನವಾಡಿ ಶಿಕ್ಷಕಿಯನ್ನು ಊರಿನಿಂದಲೇ ಹೊರಗಿಡುವ ಸಾಧ್ಯತೆ ಇದೆ ಎಂದು ಹೇಳಿದರು.
೨೦೨೨ರಲ್ಲಿ ಸ್ವಲ್ಪ ಕಡಿಮೆಯೇ ಇದ್ದ ಬಾಲ ಗರ್ಭಿಣಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಹಿಂದಿನ ವರ್ಷ ೧೪೪ ಪ್ರಕರಣಗಳು ಹಾಗೂ ಈ ವರ್ಷ ೧೫೬ ಪ್ರಕರಣಗಳು ಕಂಡು ಬಂದಿವೆ. ಮಕ್ಕಳೇ ಒಬ್ಬರನ್ನೊಬ್ಬರು ಇಷ್ಟಪಡುತ್ತಿರುವುದರಿಂದ ಈ ಪ್ರಕರಣಗಳು ಘಟಿಸುತ್ತಿವೆ ಎಂಬ ಸಾಮಾನ್ಯ ಅಭಿಪ್ರಾಯಗಳಿವೆ. ಅಸುರಕ್ಷಿತ ಲೈಂಗಿಕ ಸಂಬಂಧದಿಂದಾಗಿ ಬಾಲ್ಯದಲ್ಲೇ ಗರ್ಭಿಣಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಭಾವನೆಯಲ್ಲೇ ಬದಲಾವಣೆ ತರಲು ಪ್ರಯತ್ನಿಸಬೇಕಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವೈದ್ಯರಿಂದ ತಿಳಿಹೇಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ಹೆಚ್.ಎಸ್.ಸುಜಾತ ಮಾತನಾಡಿ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮಾರ್ಗಸೂಚಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ಸಾಲಗಾರ ರೈತನ ಹೆಸರಿನಲ್ಲೇ ಜಮೀನು ಇರಬೇಕೆಂದೇನಿಲ್ಲ. ಅವರ ತಂದೆ, ತಾಯಿ, ಪತ್ನಿಯ ಹೆಸರಿನಲ್ಲಿ ಜಮೀನು ಇದ್ದರೂ ಪ್ರಕರಣವನ್ನು ಪರಿಗಣಿಸಬೇಕೆಂದಿದೆ. ಸಾಲದ ವಿಚಾರದಲ್ಲೂ ಮಿತಿಯನ್ನು ಪರಿಗಣಿಸುವಂತಿಲ್ಲ. ಒಣಭೂಮಿ ಹೆಚ್ಚಿರುವ ಕಡೂರು ತಾಲ್ಲೂಕಿನಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಸಂಭವಿಸುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಇರುವಂತಹ ಯೋಜನೆಗಳನ್ನೇ ಬಳಸಿಕೊಂಡು ಅಂತಹ ಧೃತಿಗೆಟ್ಟ ರೈತರಿಗೆ ನಿಮ್ಮ ಜೊತೆ ಸರ್ಕಾರ ಹಾಗೂ ಅಧಿಕಾರಿಗಳು ಇದ್ದಾರೆ ಎಂದು ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ಈಚೆಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮಲ್ಲಿರುವ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ನೀಡುವುದರ ಜೊತೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಕಾಲದಲ್ಲಿ ನೀಡುವುದು, ಸಾಲ ಸೌಲಭ್ಯ ಮತ್ತು ಬ್ಯಾಂಕುಗಳಲ್ಲಿನ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಹೆಚ್ಚು ಮಾಡುವುದು ಅದರ ಜೊತೆಗೆ ಯೋಜನೆಗಳ ಬಗ್ಗೆ ರೈತರಿಗೆ ತರಬೇತಿ ನೀಡಿ ಜಾಗೃತಿ ಮೂಡಿಸಲು ಶಿಬಿರ ಆಯೋಜಿಸುವುದಾಗಿ ತಿಳಿಸಿದರು.
ರೈತರು ಏಕ ಬೆಳೆ ಬೆಳೆಯುವುದನ್ನು ನಿಲ್ಲಿಸಿ ಸಮಗ್ರ ಕೃಷಿ ಪದ್ಧತಿಯನ್ನು ಆಳವಡಿಸಿಕೊಳ್ಳಬೇಕು. ರೈತರಿಗೆ ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯಲು ಅವರಿಗೆ ಅರಿವು ಮೂಡಿಸಬೇಕು. ಕಡೂರು ಮತ್ತು ಅಜ್ಜಂಪುರ ತಾಲ್ಲೂಕಿನ ರೈತರಿಗೆ ಅಂತರ್ಜಲದ ಮಹತ್ವ ಹಾಗೂ ಅದನ್ನು ಯಾವ ರೀತಿ ಮರುಪೂರಣ ಮಾಡಬೇಕು ಎಂಬುದನ್ನು ತಿಳಿಸಬೇಕು. ಉಪಕಸುಬು ಹಾಗೂ ಸಮಗ್ರ ಕೃಷಿ ಪದ್ದತಿ ಮಾಡುವುದರಿಂದ ಕೃಷಿಯ ಸುಸ್ಥಿರತೆ ಕಂಡುಕೊಳ್ಳಬಹುದು, ರೈತರಿಗೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಬಗ್ಗೆ ಒತ್ತು ಕೊಡಲು ಇಲಾಖೆಯಿಂದ ಅರಿವು ಮೂಡಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಜುನಾಥ್ ಹಾಜರಿದ್ದರು.
Implementation of the Bhadra Balya scheme for the safety of children’s childhood
Leave a comment