ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸುಜಾತಾ ಶಿವಕುಮಾರ್ ಸಲ್ಲಿಸಿದ್ದ ರಾಜೀನಾಮೆ ವಾಪಸ್ ಪಡೆದಿದ್ದು, ನಗರಸಭೆ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಬಿಜೆಪಿ ಆಂತರಿಕ ಒಪ್ಪಂದದ ಪ್ರಕಾರ ಜೂನ್ 2ರಂದು ರಾಜೀನಾಮೆ ಸಲ್ಲಿಸಿದ್ದರು. ವಾಪಸ್ ಪಡೆಯಲು 10 ದಿನ ಅವಕಾಶ ಇರುವುದರಿಂದ ವಾಪಸ್ ಪಡೆಯದಿದ್ದರೆ ಗುರುವಾರ ಅಂಗೀಕರವಾಗುತ್ತಿತ್ತು. ಎರಡು ದಿನ ಮುನ್ನವೇ(ಮಂಗಳವಾರ) ವಾಪಸ್ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಒಪ್ಪಂದದ ಪ್ರಕಾರ ಮುಂದಿನ ಅವಧಿಯಲ್ಲಿ ಜೆಡಿಎಸ್ಗೆ ಅಧಿಕಾರ ನೀಡಬೇಕಿತ್ತು. ಸುಜಾತಾ ಅವರು ರಾಜೀನಾಮೆ ವಾಪಸ್ ಪಡೆದಿರುವುದು ಎರಡೂ ಪಕ್ಷಗಳ ಮುಖಂ ಡರಲ್ಲಿ ಗೊಂದಲ ಹಾಗೂ ಮುಜುಗರ ಉಂಟು ಮಾಡಿದೆ. ಎರಡೂ ಪಕ್ಷಗಳ ಮುಖಂಡರು ಬುಧವಾರ ರಾತ್ರಿ ತನಕ ಸಭೆ ನಡೆಸಿದರು. ಸುಜಾತಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
‘ಸುಜಾತಾ ಅವರು ಮೊದಲು ನೀಡಿದ್ದ ರಾಜೀನಾಮೆ ಪತ್ರದಲ್ಲಿ ಸಹಿ ವ್ಯತ್ಯಾಸ ಆಗಿದ್ದರಿಂದ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಗುರುವಾರ ಮತ್ತೆ ಹೊಸದಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಸಭೆಯ ಬಳಿಕ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸುಜಾತಾ ಶಿವಕುಮಾರ್, ‘ನನ್ನ ಅಧಿಕಾರ ಅವಧಿಯಲ್ಲಿ ನಡೆದಿರುವ ಕೆಲಸಗಳ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಬೇಕಿದೆ. ಅದಕ್ಕೆ ಸಮಯಾವಕಾಶ ಸಿಕ್ಕಿರಲಿಲ್ಲ. ಮುಂದೆ ಜೆಡಿಎಸ್ಗೆ ಅಧಿಕಾರ ಬಿಟ್ಟುಕೊಡಬೇಕಿದ್ದು, ಬಿಜೆಪಿಯ ಅವಧಿಯ ಕೆಲಸಗಳನ್ನು ಜನರಿಗೆ ತಿಳಿಸಲು ರಾಜೀನಾಮೆ ಹಿಂಪಡೆದಿದ್ದೇನೆ ಅಷ್ಟೆ’ ಎಂದು ಹೇಳಿದರು.
Municipal Council President Sujatha Shivakumar withdraws her resignation
Leave a comment