ಚಿಕ್ಕಮಗಳೂರು: ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಪನಿಯ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ದುರುಪಯೋಗಪಡಿಸಿಕೊಂಡಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗ್ರೀನ್ ಬಯೋಟೆಕ್ ಕಂಪನಿಯ ಮಾಲೀಕ ಡಾ. ನವೀನ್ ಮಿಸ್ಕಿತ್ ಅವರು ತಮ್ಮ ಕಂಪನಿಯಲ್ಲಿ ಜೋನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಂಜಾಬ್ ರಾಜ್ಯದ ಸರ್ತಾಜ್ ಖಾನ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.
ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಸರ್ತಾಜ್ ಖಾನ್ ಕಂಪನಿಯ ಅಧಿಕೃತ ಕೆಲಸಗಳಿಗಾಗಿ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಕೆಎ-18/ಎಂಬಿ-5086 ನೋಂದಣಿ ಸಂಖ್ಯೆಯ ಕೀಯಾ ಸಾನೇಟ್ ಕಾರನ್ನು ನೀಡಲಾಗಿತ್ತು.
ದೂರಿನ ಸಾರಾಂಶದ ಪ್ರಕಾರ, ದಿನಾಂಕ 18-10-2025 ರಂದು ರಾತ್ರಿ ಕಂಪನಿ ಕೆಲಸ ಮುಗಿಸಿ ಸಿಬ್ಬಂದಿಯೊಬ್ಬರ ಮನೆಯಲ್ಲಿ ತಂಗಿದ್ದ ಸರ್ತಾಜ್ ಖಾನ್, ಮರುದಿನ ಬೆಳಿಗ್ಗೆ ಅಲ್ಲಿಂದ ಕಾರಿನೊಂದಿಗೆ ಹೊರಟು ಹೋಗಿದ್ದಾರೆ.
ಅಂದಿನಿಂದ ಕಂಪನಿಗೆ ಹಾಜರಾಗದೆ ಹಾಗೂ ಯಾವುದೇ ಮಾಹಿತಿ ನೀಡದೆ ತಲೆಮರೆಸಿಕೊಂಡಿರುವ ಅವರು, ಕಂಪನಿಗೆ ಸೇರಿದ ಬೆಲೆಬಾಳುವ ಕಾರನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಾರನ್ನು ವಾಪಸ್ ನೀಡುವಂತೆ ಕಂಪನಿ ಮಾಲೀಕರು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಸರ್ತಾಜ್ ಖಾನ್, ಕಂಪನಿಯ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರಿನ ಪತ್ತೆ ಹಾಗೂ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.
Zonal manager defrauds private company
Leave a comment