ಚಿಕ್ಕಮಗಳೂರು: ರಸ್ತೆಗೆ ಹಂದಿಗಳು ಏಕಾಏಕಿ ಅಡ್ಡ ಬಂದ ಪರಿಣಾಮ ಸ್ಕೂಟಿಗೆ ಬ್ರೇಕ್ ಹಾಕಿದಾಗ ಹಿಂಬದಿ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ತಿರುಗುಣ ಗ್ರಾಮದ ಸಿದ್ದರಹಟ್ಟಿ ನಿವಾಸಿ ಸಂಜಯ ಮೃತಪಟ್ಟವರು.
ಘಟನೆ ವಿವರ: ಸೆ.3ರಂದು ರಾತ್ರಿ ಸುಮಾರು 11.30ರ ವೇಳೆಗೆ ಸಂಜಯ ಅವರು ತಮ್ಮ ಅಣ್ಣ ಸುನೀಲ್ ಅವರೊಂದಿಗೆ ಕೆಲಸದ ನಿಮಿತ್ತ ಕೆ.ಆರ್.ಪೇಟೆಗೆ ತೆರಳಿದ್ದರು. ಸುನೀಲ್ ಅವರು ತಮ್ಮ KA-18-EN-7031 ಸಂಖ್ಯೆಯ ಸ್ಕೂಟಿಯನ್ನು ಚಲಾಯಿಸುತ್ತಿದ್ದು, ಸಂಜಯ ಹಿಂಬದಿ ಸವಾರರಾಗಿದ್ದರು.
ಕೆಲಸ ಮುಗಿಸಿಕೊಂಡು ಸೆ.4ರಂದು ಬೆಳಗ್ಗೆ ಸುಮಾರು 6.25ರ ವೇಳೆಗೆ ಕೆ.ಆರ್.ಪೇಟೆಯಿಂದ ಸಿದ್ದರಹಟ್ಟಿ ಕಡೆಗೆ ವಾಪಸ್ ಬರುತ್ತಿದ್ದರು. ಬಿಲ್ಲೇನಹಳ್ಳಿ ಗ್ರಾಮದ ದುಗ್ಗಪ್ಪಶೆಟ್ಟಿ ಅವರ ತೋಟದ ಮುಂದೆ ಹಾದು ಹೋಗುವ ಟಾರು ರಸ್ತೆಯಲ್ಲಿ ಸ್ಕೂಟಿ ಸಾಗುತ್ತಿದ್ದಾಗ ಏಕಾಏಕಿ ಹಂದಿಗಳು ರಸ್ತೆಗೆ ಅಡ್ಡ ಬಂದಿವೆ ಎನ್ನಲಾಗಿದೆ.
ಈ ವೇಳೆ ಸುನೀಲ್ ಅವರು ಯಾವುದೇ ಮುನ್ನೆಚ್ಚರಿಕೆ ನೀಡದೆ ತಕ್ಷಣ ಸ್ಕೂಟಿಗೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಕುಳಿತಿದ್ದ ಸಂಜಯ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ.
ಘಟನೆಯ ವಿಷಯವನ್ನು ಸುನೀಲ್ ಅವರು ಬೆಳಗ್ಗೆ ಸುಮಾರು 6.30ಕ್ಕೆ ತಂದೆ ಆಂಜನಪ್ಪ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದು, ಆಂಜನಪ್ಪ ಹಾಗೂ ಅವರ ಅಣ್ಣನ ಮಗ ಸತೀಶ ಅವರು ಸ್ಥಳಕ್ಕೆ ತೆರಳಿದ್ದಾರೆ. ಗಾಯಗೊಂಡಿದ್ದ ಸಂಜಯ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕಂಚೇನಹಳ್ಳಿ ಸಮೀಪ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ನಂತರ ಮೃತದೇಹವನ್ನು ಚಿಕ್ಕಮಗಳೂರಿನ ಎಂ.ಜಿ. ಆಸ್ಪತ್ರೆಯ ವೈದ್ಯರ ಸಲಹೆಯಂತೆ ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ಸಂಜಯ ಅವರ ತಂದೆ ಆಂಜನಪ್ಪ ಟಿ.ಪಿ. ಅವರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ, ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಸ್ಕೂಟಿ ಚಲಾಯಿಸಿ ಅಪಘಾತಕ್ಕೆ ಕಾರಣನಾದ ತಮ್ಮ ಮಗ ಸುನೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ದೂರಿನ ಆಧಾರದ ಮೇಲೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Young man dies after falling onto road after scooter brakes fail when pigs cross
Leave a comment