ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಮತ್ತಿಮರ ಎಂಬಲ್ಲಿ ಹುಲ್ಲು ಸಾಗಿಸುತ್ತಿದ್ದ ಟ್ರಾಕ್ಟರ್ಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆದಿದೆ. ಚಾಲಕನ ತತ್ಕ್ಷಣದ ಸಮಯಪ್ರಜ್ಞೆಯಿಂದಾಗಿ ಭೀಕರ ಅನಾಹುತವೊಂದು ತಪ್ಪಿದಂತಾಗಿದೆ.
ಹಸುವಿಗೆ ಮೇವು ನೀಡಲು ಖರೀದಿಸಿದ್ದ ಹುಲ್ಲನ್ನು ಟ್ರಾಕ್ಟರ್ನಲ್ಲಿ ಲೋಡ್ ಮಾಡಿಕೊಂಡು ಸಾಗಿಸಲಾಗುತ್ತಿತ್ತು. ಮತ್ತಿಮರ ತಲುಪುತ್ತಿದ್ದಂತೆ ರಸ್ತೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಯು ಟ್ರಾಕ್ಟರ್ನಲ್ಲಿದ್ದ ಹುಲ್ಲಿಗೆ ಸ್ಪರ್ಶಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಕ್ಷಣಾರ್ಧದಲ್ಲಿ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿಯ ನಡುವೆಯೇ ಹುಲ್ಲು ಧಗಧಗನೆ ಉರಿಯತೊಡಗಿದೆ.
ಹುಲ್ಲಿಗೆ ಬೆಂಕಿ ಹತ್ತಿದ ತಕ್ಷಣ ಗಾಬರಿಯಾಗದ ಚಾಲಕ, ಬೆಂಕಿ ಎಂಜಿನ್ಗೆ ಹರಡದಂತೆ ತಡೆಯಲು ಕೂಡಲೇ ಟ್ರಾಕ್ಟರ್ನ ಟ್ರೈಲರ್ ಅನ್ನು (Hydraulic tipping) ಮೇಲೆತ್ತಿದ್ದಾರೆ. ಇದರಿಂದ ಉರಿಯುತ್ತಿದ್ದ ಹುಲ್ಲು ರಸ್ತೆಯ ಮೇಲೆ ಬಿದ್ದಿದ್ದು, ಟ್ರಾಕ್ಟರ್ ಎಂಜಿನ್ ಮತ್ತು ಚಾಲಕ ಸುರಕ್ಷಿತವಾಗಿದ್ದಾರೆ. ಒಂದು ವೇಳೆ ಟ್ರೈಲರ್ ಮೇಲೆತ್ತದಿದ್ದರೆ ಇಡೀ ಟ್ರಾಕ್ಟರ್ ಭಸ್ಮವಾಗುವ ಸಾಧ್ಯತೆಯಿತ್ತು.
ಬೆಂಕಿ ತೀವ್ರವಾಗಿ ವ್ಯಾಪಿಸಿದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು, ಬಕೆಟ್ಗಳಲ್ಲಿ ನೀರು ತಂದು ಹಾಗೂ ಲಭ್ಯವಿರುವ ಸಾಧನಗಳನ್ನು ಬಳಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಗಿದ್ದು, ಬೆಂಕಿ ಅವಘಡದಿಂದ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.
Tractor carrying hay catches fire after accidentally touching an electric wire
Leave a comment