ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಆಶೋತ್ತರ ಕೇವಲ ಚುನಾವಣೆ ಗೆಲ್ಲುವುದಲ್ಲ, ದೇಶ ಗೆಲ್ಲಿಸುವುದು, ಬಡವರಿಗೆ ಬಲಕೊಡುವುದಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್ ಕೇವಲ ಚುನಾವಣೆ ಗೆಲ್ಲುವುದಲ್ಲ.
ದೇಶದ ಮೂಲಸೌಕರ್ಯಾಭಿವೃದ್ಧಿಗೆ ಒತ್ತುಕೊಡುವುದಾಗಿದೆ. ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡುವುದಾಗಿದೆ. ವಸತಿ ರಹಿತರಿಗೆ ವಸತಿ ಕಲ್ಪಿಸುವುದು. ಈ ಎಲ್ಲವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ರೂಪಿಸಿದೆ ಎಂದರು.
100 ಲಕ್ಷ ಕೋಟಿ ರು, ವೆಚ್ಚದಲ್ಲಿ ಭಾರತ ಆತ್ಮನಿರ್ಬರವಾಗಬೇಕು ಎನ್ನುವುದು ಬಜೆಟ್ ಉದ್ದೇಶವಾಗಿದೆ. ನಮ್ಮ ಬೆಳವಣಿಗೆಯ ದರ 7.8 ದಾಟಿದೆ, ಇದು ಒಂದು ರೀತಿ ದಾಖಲೆಯಾಗಿದೆ. ಭಾರತ ಆರ್ಥಿಕವಾಗಿ ಜಗತ್ತಿನ 4ನೇ ಅತಿ ದೊಡ್ಡ ಶಕ್ತಿವಾಗಿದ್ದು, ಶೀಘ್ರವೇ 3ನೇ ಸ್ಥಾನಕ್ಕೆ ಏರುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 2047ಕ್ಕೆ 100 ವರ್ಷವಾಗಲಿದೆ. ಆ ವೇಳೆಗೆ ಭಾರತ ಆರ್ಥಿಕ-ಜ್ಞಾನದಲ್ಲಿ ಬಲಶಾಲಿಯಾಗಬೇಕು. ಭಾರತ ಜಗತ್ತಿನ ಕಲ್ಯಾಣ ಬಯಸುವ ಸಿದ್ದಾಂತ ಹೊಂದಿರುವ ರಾಷ್ಟ್ರವಾಗಿದೆ. ಭಾರತದ ಸೈದ್ದಾಂತಿಕ ವಿಚಾರಧಾರೆ ಮೂಲಕ ಜಗತ್ತಿನ ಕಲ್ಯಾಣವಾಗಬೇಕು.
ಈ ಕಲ್ಯಾಣಕ್ಕೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಆರ್ಥಿಕ ಚೈತನ್ಯ ಮೂಡಿಸಲಿದೆ. ಎಲ್ಲಾ ಕ್ಷೇತ್ರದಲ್ಲೂ ಆರ್ಥಿಕ ಹೊಸ ಹುರುಪು ನೀಡುವ ಬಜೆಟ್ ಮಂಡಿಸಿದ್ದಾರೆ. ಜನರ ಆಶೋತ್ತರಗಳನ್ನ ಈಡೇರಿಸುವ ಕಡೆ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದರು.
The Union Budget emphasizes on the development of the country’s infrastructure.
Leave a comment