ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಯುಗಾದಿಯ ಮರುದಿನದಿಂದ ಆರಂಭವಾದ ರಥೋತ್ಸವದ ಕಾರ್ಯಕ್ರಮಗಳಲ್ಲಿ ಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ರಥದ ಕಣಜ ಪೂಜೆ, ದೇವತಾ ಪ್ರಾರ್ಥನೆ, ಶುದ್ಧಪುಣ್ಯಾಹ, ಮೃತ್ತಿಕಾ ಸಂಗ್ರಹಣ ಪೂರ್ವಕ ಅಂಕುರಾರ್ಪಣ, ಯಾಗಶಾಲಾ ಪ್ರವೇಶ, ರಕ್ಷಾಬಂಧನ, ಭೇರಿ ತಾಡನ, ಗರುಡೋತ್ಸವ, ದಿಕ್ತಾಳ ಘೋಷಣೆ, ದೇವತಾ ಆವಾಹನ, ದಿಗ್ನಲಿ ಮತ್ತು ಧ್ವಜಾರೋಹಣ ನಡೆಸಲಾಗಿತ್ತು.
ಶನಿವಾರ ಶೇಷ ವಾಹನೋತ್ಸವ, ಭಾನುವಾರ ಪುಷ್ಪ ಮಂಟಪೋತ್ಸವ, ಸೋಮವಾರ ಸ್ವಾಮಿಗೆ ವಸ್ತ್ರಾಲಂಕಾರ, ಸಂಜೆ ರಥಕ್ಕೆ ಕಲಶಾರೋಹಣ, ಗಜೇಂದ್ರ ಮೋಕ್ಷ, ಗರುಡೋತ್ಸವ ಸೇವೆ, ಲಕ್ಷ್ಮೀ ರಂಗನಾಥಸ್ವಾಮಿಯವರಿಗೆ ಕಲ್ಯಾಣೋತ್ಸವ ನಡೆಸಲಾಗಿತ್ತು. ಮಂಗಳವಾರ ಗಜ ವಾಹನೋತ್ಸವ, ಶ್ರೀಕೃಷ್ಣ ಗಂಧೋತ್ಸವ, ಉಯ್ಯಾಲೋತ್ಸವದ ಬಳಿಕ ಉತ್ಸವಮೂರ್ತಿಗಳ ರಥಾರೋಹಣ, ಉಕ್ತ ಹೋಮಗಳನ್ನು ನಡೆಸಿ, ಮಹಾಮಂಗಳಾರತಿ ಸಲ್ಲಿಸಿ ಭಕ್ತರ ಜಯಘೋಷಗಳ ನಡುವೆ ಬ್ರಹ್ಮ ರಥೋತ್ಸವ ನಡೆಸಲಾಯಿತು.
ಗಳಿಗೆ ರಥೋತ್ಸವದ ಬಳಿಕ ರಥವನ್ನು ಗ್ರಾಮ ಮಧ್ಯೆಯೇ ನಿಲ್ಲಿಸಿ ಭಕ್ತರು ಮಂಗಳಾರತಿ, ಹಣ್ಣು-ಕಾಯಿ ಸಮರ್ಪಿಸಿದರು. ದೇವಾಲಯವು ಮುಜರಾಯಿ ಆಡಳಿತಕ್ಕೆ ಒಳಪಟ್ಟಿದ್ದು ತಾಲ್ಲೂಕು ಆಡಳಿತದ ಪರವಾಗಿ ಗೌರವ ಸಮರ್ಪಿಸಲಾಯಿತು.
ಬುಧವಾರ ಬೆಳಿಗ್ಗೆ ದೊಡ್ಡ ರಥೋತ್ಸವದ ಅಂಗವಾಗಿ ಊರಿನ ಬೀದಿಗಳಲ್ಲಿ ರಥ ಎಳೆಯುವುದು, ನಂತರ ರಥಾವರೋಹಣ, ಉಯ್ಯಾಲೋತ್ಸವ, ಮಧ್ಯಾಹ್ನ ಕುಂಕುಮೋತ್ಸವ, ಸಂಜೆ ಅಡ್ಡಪಲ್ಲಕ್ಕಿ ಉತ್ಸವ, ಸಿಂಹ ವಾಹನೋತ್ಸವ, ಶಯನೋತ್ಸವ ನಡೆಯುವುದು. ಗುರುವಾರ ಅಶ್ವಾರೋಹಣೋತ್ಸವ, ಮಧ್ಯಾಹ್ನ ಓಕಳಿ ಸೇವೆ, ತೀರ್ಥಸ್ನಾನ, ಸಾಯಂಕಾಲ ಹನುಮ ವಾಹನೋತ್ಸವ, ಪೂರ್ಣಾಹುತಿ, ಪುಷ್ಪ ಯಾಗೋತ್ಸವ ಮತ್ತು ಧ್ವಜಾರೋಹಣ, ಮೌನಬಲಿಗಳ ನಂತರ ರಥೋತ್ಸವ ಮುಕ್ತಾಯಗೊಳ್ಳಲಿದೆ.
S. Bidreya’s fire Lakshmi Ranganathaswamy Brahma Chariot Festival
Leave a comment