ಚಿಕ್ಕಮಗಳೂರು: ದ್ವೇಷ ಭಾಷಣ ಪ್ರಕರಣದಲ್ಲಿ ಎಂಎಲ್ಸಿ ಸಿ.ಟಿ. ರವಿ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ, ನಗರ ಠಾಣೆ ಪೊಲೀಸರು ಭಾನುವಾರ ಅವರ ನಿವಾಸಕ್ಕೆ ಭೇಟಿ ನೀಡಿ ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಲು ಮುಂದಾದರು. ಆದರೆ ಸಿ.ಟಿ. ರವಿ ನೋಟೀಸ್ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ನೋಟೀಸ್ ನೀಡದೇ ವಾಪಸ್ಸಾದರು.
ಮನೆಗೆ ಆಗಮಿಸಿದ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ. ರವಿ, “ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದೀರಿ? ಮೊದಲು ಎಫ್ಐಆರ್ ಪ್ರತಿಯನ್ನು ನೀಡಿ, ನಂತರ ನೋಟೀಸ್ ನೀಡಿ” ಎಂದು ಪ್ರಶ್ನಿಸಿದರು. ತನಿಖಾಧಿಕಾರಿಯ ಬದಲು ಬೇರೆ ಪೊಲೀಸರು ನೋಟೀಸ್ ತಂದಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು.
“ನಾನು ಮಾಡಿದ ಭಾಷಣದಲ್ಲಿ ದ್ವೇಷದ ಅಂಶ ಎಲ್ಲಿದೆ? ಎಫ್ಐಆರ್ನಲ್ಲಿ ಯಾರ ವಿರುದ್ಧ ದ್ವೇಷ ಭಾಷಣ ಮಾಡಿದ್ದೇನೆ ಎಂದು ಉಲ್ಲೇಖಿಸಲಾಗಿದೆ? ನಾನು ಬೆಂಕಿ ಹಚ್ಚಲು ಬಂದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ದೂರು ನೀಡಿದ ವ್ಯಕ್ತಿಗೂ ಆತನಿಗೂ ಏನು ಸಂಬಂಧ? ‘ಮುಲ್ಲಾ’ ಎಂದರೆ ಮುಸ್ಲಿಂ ಎಂದು ಪೊಲೀಸರು ಅರ್ಥೈಸಿಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದರು.
“ದೂರು ಬಂದ ತಕ್ಷಣ ಎಫ್ಐಆರ್ ದಾಖಲಿಸುತ್ತೀರಾ? ದೂರುದಾರ ಯಾರು, ಆರೋಪ ಏನು ಎಂಬುದನ್ನು ಪರಿಶೀಲಿಸಬೇಕಲ್ಲವೇ? ನನ್ನ ಭಾಷಣದಲ್ಲಿ ‘ಧರ್ಮ’ ಎಂಬ ಪದವೇ ಇಲ್ಲ. ಬೆಂಕಿ ಹಚ್ಚಲು ಬಂದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ನಾಳೆಯೂ ಅದನ್ನೇ ಮಾತನಾಡುತ್ತೇನೆ. ‘ಅವನ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂದು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ” ಎಂದು ಸಿ.ಟಿ. ರವಿ ಹೇಳಿದರು.
ಇದೇ ವೇಳೆ, “ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸಬಾರದು. ಪೊಲೀಸ್ ಮ್ಯಾನ್ಯುಯಲ್ ಪ್ರಕಾರ ಕೆಲಸ ಮಾಡಬೇಕು” ಎಂದು ಅವರು ಸಲಹೆ ನೀಡಿದರು. ಸಿ.ಟಿ. ರವಿ ನಿವಾಸದಲ್ಲಿ ಇಬ್ಬರು ವಕೀಲರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. “ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಾವು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿದ್ದೀರಾ? ನಾವು ನೀಡಿದ ದೂರುಗಳಿಗೆ ಏನು ಕ್ರಮ ಕೈಗೊಂಡಿದ್ದೀರಿ?” ಎಂದು ಬಿಜೆಪಿ ಕಾರ್ಯಕರ್ತರು ಪೊಲೀಸರನ್ನು ಪ್ರಶ್ನಿಸಿದರು.
ಈ ವೇಳೆ ಸಿ.ಟಿ. ರವಿ ಪರವಾಗಿ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ನೋಟೀಸ್ ಸ್ವೀಕರಿಸಲು ಸಿ.ಟಿ. ರವಿ ನಿರಾಕರಿಸಿದ ಹಿನ್ನೆಲೆಯಲ್ಲಿ, ನಗರ ಠಾಣೆ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿ ನೋಟೀಸ್ ನೀಡದೇ ವಾಪಸ್ಸಾದರು.
ವಾಪಸ್ಸಾಗುವ ವೇಳೆ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್, “ನಾನೇ ತನಿಖಾಧಿಕಾರಿ (IO). ಅವರಿಗೆ ನೋಟೀಸ್ ಬೇಡ ಎಂದಿದ್ದಾರೆ” ಎಂದು ಪ್ರತಿಕ್ರಿಯಿಸಿದರು
The police who went to serve notice on CT Ravi’s house have returned.
Leave a comment