ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಡಳಿತದ ವತಿಯಿಂದ ನಡೆಯುವ ಸಂದಲ್ ಉರುಸ್ಗೆ ಬುಧವಾರ ಚಾಲನೆ ನೀಡಲಾಯಿತು.
ಅತ್ತಿಗುಂಡಿಯಿಂದ ಬಾಬಾಬುಡನ್ಗಿರಿ ದರ್ಗಾದವರೆಗೆ ಸಾವಿರಾರು ಮಂದಿ ಫಕೀರರು ಹಾಗೂ ಸಮುದಾಯದ ಮುಖಂಡರು ಸಂದಲ್ಅನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುದು ನಂತರ ದರ್ಗಾದ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಉರುಸ್ ಆಚರಿಸಲಾಯಿತು. ಉರುಸ್ ಹಿನ್ನೆಲೆಯಲ್ಲಿ ಅತ್ತಿಗುಂಡಿಯಿಂದ ಮೆರವಣಿಯಲ್ಲಿ ತರಲಾದ ಗಂಧವನ್ನು ಫಕೀರರು ಹಾಗೂ ಸಮುದಾಯದ ಮುಖಂಡರು ಶಾಖಾದ್ರಿ ಅವರಿಗೆ ಒಪ್ಪಿಸಿದರು.
ನಂತರ ಶಾಖಾದ್ರಿ ಪಾರಂಪರಿಕ ಧಾರ್ಮಿಕ ವಿಧಿಯಂತೆ ಸಂದಲ್ಲೇಪಿಸಿ ಚಾದರ್ಹೊರಿಸಲು ಮುಂದಾದರು. ಆದರೆ ಸ್ಥಳದಲ್ಲಿದ್ದ ಅಧಿಕಾರಿಗಳು ನ್ಯಾಯಾಲಯದ ಆದೇಶದ ಕಾರಣ ನೀಡಿ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಗುಹೆಯೊಳಗೆ ಕೊಂಡೊಯ್ಯಲು ಶಾಖಾದ್ರಿಗೆ ಅವಕಾಶ ನೀಡಲಿಲ್ಲ. ನಂತರ ಸಂದಲ್ ಹಾಗೂ ಹಸಿರು ಬಟ್ಟೆಯನ್ನು ಮುಜಾವರ್ಗೆ ಹಸ್ತಾಂತರಿಸಿ ಧಾರ್ಮಿಕ ವಿಧಿ ನೆರವೇರಿಸಿದರು.
ಶಾಖಾದ್ರಿ ಅವರನ್ನು ಗುಹೆಯೊಳಗೆ ಪ್ರವೇಶಿಸಲು ನಿರಾಕರಣೆಯಿಂದಾಗಿ ಸ್ಥಳದಲ್ಲಿ ಸಣ್ಣ ಗೊಂದಲ ಉಂಟಾಯಿತು. ಸ್ಥಳದಲ್ಲಿ ಮುಖಂಡರು ಶಾಖಾದ್ರಿ ನೇತೃತ್ವದಲ್ಲಿ ಕೆಲ ಹೊತ್ತು ಧರಣಿ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು, ಸಮುದಾಯದ ಮುಖಂಡರು ಯಾವುದೇ ಗೊಂದಲ, ವಾಗ್ವಾದಕ್ಕೆ ಅವಕಾಶ ಆಸ್ಪದ ನೀಡಲಿಲ್ಲ. ನಂತರ ಗುಹೆಯ ಮುಂಭಾಗದ ಆವರಣದಲ್ಲಿ ಫಕೀರರು ಹಾಗೂ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸುವ ಮೂಲಕ ಉರೂಸ್ನ ಮೊದಲ ದಿನದ ಧಾರ್ಮಿಕ ವಿಧಿ ನೆರವೇರಿಸಿದರು.
ಮೂರು ದಿನಗಳ ಕಾಲ ಉರುಸ್ ನಡೆಯಲಿದ್ದು, ಗುರುವಾರ ದರ್ಗಾದ ಆವರಣದಲ್ಲಿ ಫಕೀರರಿಂದ ಪ್ರಾರ್ಥನೆ ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ. ಶುಕ್ರವಾರ ನಾಗೇನಹಳ್ಳಿಯ ಜನ್ನತ್ ನಗರದಲ್ಲಿ ಧಾರ್ಮಿಕ ಉರುಸ್ ಅಂಗವಾಗಿ ವಿಧಿ ವಿಧಾನಗಳು ನಡೆಯುವುದರೊಂದಿಗೆ ಉರೂಸ್ಗೆ ತೆರೆ ಬೀಳಲಿದೆ.
ಉರೂಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದರ್ಗಾದ ಆವರಣದಲ್ಲಿ ಸಕಲ ಸಿದ್ಧತೆಯೊಂದಿಗೆ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಉರೂಸ್ನಲ್ಲಿ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸುಮಾರು ಸಾವಿರ ಭಕ್ತರು ಹಾಗೂ ಫಕೀರರು ಭಾಗವಹಿಸಿದ್ದರು.
ಉರುಸ್ನಲ್ಲಿ ಸೈಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ, ಸೈಯದ್ ಫಕ್ರುದ್ದೀನ್ ಶಾಖಾದ್ರಿ, ಸೇರಿದಂತೆ ಸಮುದಾಯದ ಮುಖಂಡರಾದ ಸಿರಾಜ್, ನಜೀರ್ ಅಹ್ಮದ್, ಸಿ.ಎಸ್.ಖಲಂದರ್, ಮಹ್ಮದ್ಶಾಹಿದ್ರಜ್ವಿ, ಜಮ್ಶೀದ್, ಗೌಸ್ಮುನೀರ್, ಅಜ್ಮದ್ಪಾಷ,ಜಂಶಿದ್, ಸಿರಾಜ್, ನಾಸೀರ್ ಅಹ್ಮದ್ ಇದ್ದರು.
ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಜಿತೇಂದ್ರಕುಮಾರ್ ದಯಾಮ, ಆಚರಣಾ ಸಮಿತಿ ಉಸ್ತುವಾರಿ ಮತ್ತು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ, ಕನಕರಡ್ಡಿ, ತಹಸೀಲ್ದಾರ್ ಹಾಜರಿದ್ದರು.
Sandal Urus inaugurated at Bababudan Dargah
Leave a comment