ಚಿಕ್ಕಮಗಳೂರು: ರಾಜ್ಯಸರ್ಕಾರ ಸೆ.೨೨ ರಿಂದ ಅ.೭ ರವರೆಗೆ ನಡೆಸಲಿರುವ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ರವರ ಅಭಿಮಾನಿಗಳು ಹಾಗೂ ಅನುಯಾಯಿಗಳು ಧರ್ಮದ ಕಾಲಂ ೬ ರಲ್ಲಿ ‘ಬೌದ್ಧ’ ಎಂದು ಬರೆಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆ ‘ಡಿಎಂಎಟಿ’ ಘಟಕ ಮನವಿ ಮಾಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೇದಿಕೆಯ ಗೌರವ ಅಧ್ಯಕ್ಷ ಪುಟ್ಟಸ್ವಾಮಿ.ಡಿ ಅವರು ಭಾರತದಲ್ಲಿ ಜನಿಸಿದ ಗೌತಮ ಬುದ್ಧರು ವಿಶ್ವಕ್ಕೆ ಕರುಣೆ, ಪ್ರೀತಿ, ಮೈತ್ರಿಯನ್ನು ಬೋಧಿಸಿದ್ದಾರೆ. ಪಂಚಶೀಲ ಮತ್ತು ಆಷ್ಟಾಂಗ ಮಾರ್ಗದ ಮೂಲಕ ಮನುಷ್ಯರನ್ನು ತಿದ್ದಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ರೂಢಿಸಿಕೊಂಡು ಸಾರ್ಥಕ ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಿದ್ದಾರೆ ಎಂದರು.
ಯುದ್ಧ, ಜಾತೀಯತೆ, ದೌರ್ಜನ್ಯ, ದಬ್ಬಾಳಿಕೆ, ಮೂಢನಂಬಿಕೆಗಳ ಆಚರಣೆಗಳನ್ನು ಧಿಕ್ಕರಿಸಿ ವಿಶ್ವ ಶಾಂತಿಯನ್ನು ಸರಳ ರೀತಿಯಲ್ಲಿ ಜನಮಾನಸವನ್ನು ತಲುಪಿದ ಇವರು, ಮೌರ್ಯ ದೊರೆ ಅಶೋಕನಂತಹವರು ಬುದ್ಧರ ಬೋಧನೆಗಳಿಗೆ ಮಾರುಹೋಗಿ ಕಳಿಂಗ ಯುದ್ಧದ ವಿಜಯ ನಿಜವಾದ ವಿಜಯವಲ್ಲ, ಬದಲಿಗೆ ಜನಕಲ್ಯಾಣವೇ ನಿಜವಾದ ವಿಜಯ ಎಂದು ಸಂಕಲ್ಪಿಸಿದ್ದರು ಎಂದು ಹೇಳಿದರು.
ಮೌರ್ಯರ ನಂತರ ಕಾನಿಷ್ಕ, ಹರ್ಷವರ್ಧನ ಮುಂತಾದ ಪ್ರಮುಖ ರಾಜಮಹಾರಾಜರು ಬೌದ್ಧ ಧಮ್ಮವನ್ನು ಭಾರತದಾಚೆಗೂ ಹರಡಿದರು. ಭಾರತದಲ್ಲಿ ಜನಿಸಿದ ಬೌದ್ಧ ಧರ್ಮ ಇಂದು ಪ್ರಪಂಚದ ಹಲವು ರಾಷ್ಟ್ರಗಳ ಧರ್ಮವಾಗಿದೆ. ಮಾನವ ಜೀವನಕ್ಕೆ ಬೇಕಾದ ಸರಳ ಮಾರ್ಗದರ್ಶನಗಳು ಬೌದ್ಧ ಧರ್ಮದಲ್ಲಿವೆ ಎಂಬುದನ್ನು ಮನಗಂಡ ಡಾ. ಬಿ.ಆರ್ ಅಂಬೇಡ್ಕರ್ ಅವರು ಸುಮಾರು ೨೦ ವರ್ಷಗಳ ಕಾಲ ವಿಶ್ವದ ಹಲವು ಧರ್ಮಗಳನ್ನು ಅಧ್ಯಯನ ಮಾಡಿ, ಪೂರ್ವಿಕರು ಅನುಸರಿಸಿದ ಭಾರತದ ನೆಲಮೂಲದ ಧರ್ಮ ಬೌದ್ಧ ಧರ್ಮಕ್ಕೆ ಮರಳಿದ್ದು ಇತಿಹಾಸ ಎಂದರು.
ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾನಕ್ಕಾಗಿ ಪ್ರಬುದ್ಧರು ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ, ಅಂಬೇಡ್ಕರ್ ಅವರ ಮಾರ್ಗದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಧರ್ಮದ ಕ್ರ.ಸಂ ೬ ರಲ್ಲಿ ಬೌದ್ಧ ಎಂದು ಬರೆಸುವಂತೆ ಮನವಿ ಮಾಡಿದರು.
ಪರಿಶಿಷ್ಟ ಜಾತಿಯವರು ಬೌದ್ಧ ಎಂದು ಬರೆಸಿದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಮೀಸಲಾತಿಗೆ ಯಾವುದೇ ತೊಂದರೆಯಾಗುವುದಿಲ್ಲ, ಈ ಬಗ್ಗೆ ದಲಿತಪರ ಸಂಘಟನೆಗಳು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿ ಸಮೀಕ್ಷೆಯ ಕಾಲಂ ೮ ರಲ್ಲಿನ ೬ನೇ ಕ್ರಮ ಸಂಖ್ಯೆಯಲ್ಲಿ ಬೌದ್ಧ ಎಂದು ತಪ್ಪದೇ ಬರೆಸಲು ಮಾರ್ಗದರ್ಶನ ಮಾಡಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಬಿ.ಸಿ. ಕುಮಾರ್, ಮುಖಂಡರಾದ ಸುರೇಶ್.ಡಿ.ಎನ್, ಜಗದೀಶ್.ಎ, ರವಿ.ಎಸ್.ಇ, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.
Request to write Buddhist in caste survey
Leave a comment